ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿ: ರಾಷ್ಟ್ರಪತಿ ಪ್ರತಿಭಾಗೆ ಮನವಿ
ಗಡಿ ವಿವಾದ ಸುಪ್ರೀಂಕೋರ್ಟಿನಲ್ಲಿದ್ದು, ನ್ಯಾಯಾಲಯದ ಅಂತಿಮ ತೀರ್ಪು ಪ್ರಕಟವಾಗುವವರೆಗೆ ಬೆಳಗಾವಿಯನ್ನು ಕೇಂದ್ರಾಡಳಿತಕ್ಕೆ ಒಳಪಡಿಸಿ ಎಂದು ಮುಂಬೈನ ರಾಜಭವನದಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಮಂಗಳವಾರ ಉದ್ಧವ್ ಠಾಕ್ರೆ ಭೇಟಿ ಮಾಡಿ ಈ ಮನವಿ ಸಲ್ಲಿಸಿದರು.
ಬೆಳಗಾವಿಯಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ಇದೆ. ಮರಾಠಿ ಜನರ ಮೇಲಿರುವ ಹಗೆತನದಿಂದ ಕರ್ನಾಟಕ ಸರ್ಕಾರವು ಬೆಳಗಾವಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಿದೆ ಎಂದು ಉದ್ಧವ್ ಠಾಕ್ರೆ ರಾಷ್ಟ್ರಪತಿ ಬಳಿ ದೂರಿದರು.
'ಈ ವಿಚಾರದ ಕುರಿತು ನೀವು ಮಧ್ಯಪ್ರವೇಶಿಸಬೇಕು. ಬೆಳಗಾವಿ ಮತ್ತು ಕರ್ನಾಟಕದಲ್ಲಿ ಮರಾಠಿ ಭಾಷಿಗರು ನೆಲೆಸಿರುವ ಇತರ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವಂತೆ ನೀವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಉದ್ಧವ್ ಠಾಕ್ರೆ ಪಾಟೀಲ್ ಅವರಲ್ಲಿ ಕೋರಿದರು.
'ಬೆಳಗಾವಿ ಮತ್ತು ಇತರ ಪ್ರದೇಶಗಳಲ್ಲಿರುವ ಮರಾಠಿ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ತಮ್ಮ ನೋವುಗಳನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿರುವ ಮರಾಠಿಗರ ವಿರುದ್ಧ ಕರ್ನಾಟಕ ಸರ್ಕಾರ ಲಾಠಿ ಮತ್ತು ಗುಂಡುಗಳನ್ನು ಬಳಸುತ್ತಿದೆ' ಎಂದು ಆರೋಪಿಸಿದರು.