ಚಿರಂಜೀವಿಗೆ ಪ್ರವಾಸೋದ್ಯಮ ಖಾತೆ ಬೇಕಂತೆ!
ಇತ್ತೀಚೆಗೆ ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಚಿರಂಜೀವಿಗೆ ವಿಶೇಷ ಆಹ್ವಾನ ಸಿಕ್ಕಿತ್ತು. ಅಬ್ದುಲ್ ಕಲಾಂ, ದಿನೇಶ್ ದ್ವಿವೇದಿ, ಶೀಲಾ ದೀಕ್ಷಿತ್ ಜೊತೆಗೆ ಚಿರಂಜೀವಿ ಕೂಡಾ ದೆಹಲಿನಲ್ಲಿ ನಡೆದ ಪ್ರವಾಸೋದ್ಯಮ ಸಮಾವೇಶದಲ್ಲಿ ಭಾಗವಹಿಸಿದ್ದರು.
ದೆಹಲಿಗೆ ತೆರಳಿ ಮಾತುಕತೆ ನಡೆಸಿದ ಚಿರಂಜೀವಿ ಮುಖದಲ್ಲಿ ವಿಜಯದ ನಗೆ ಎದ್ದು ಕಾಣುತ್ತಿತ್ತು. ಚಿರಂಜೀವಿಯ ಜನಪ್ರಿಯತೆಯನ್ನು ಬಳಸಿಕೊಂಡು ಪ್ರವಾಸೋದ್ಯಮ ಖಾತೆಗೆ ಹೆಚ್ಚಿನ ಬಲ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಜೊತೆಗೆ ಪ್ರವಾಸೋದ್ಯಮ ಖಾತೆ ನೀಡಿ ಎಂದು ಚಿರಂಜೀವಿ ಕೂಡಾ ದುಂಬಾಲು ಬಿದ್ದಿದ್ದಾರೆ ಎಂಬ ಸುದ್ದಿಯಿದೆ.
ಕಾಂಗ್ರೆಸ್ ಹೈ ಕಮಾಂಡ್ ಕಡೆಯಿಂದ ಬಂದ ಸುದ್ದಿ ಪ್ರಕಾರ, ಚಿರಂಜೀವಿಗೆ ಪ್ರವಾಸೋದ್ಯಮ ಖಾತೆ ಸಿಗುವುದು ಬಹುತೇಕ ಖಚಿತವಾಗಿದೆಯಂತೆ.
ಕೇಂದ್ರ ಸಂಪುಟದಕ್ಕೆ ಚಿರಂಜೀವಿ ಸೇರ್ಪಡೆ ನಂತರ ಆಂಧ್ರಪ್ರದೇಶದ ಕಿರಣ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಮೂರು ಖಾತೆಗಳಿಗೆ ಪಿಆರ್ ಪಿ ಬೇಡಿಕೆ ಸಲ್ಲಿಸಲಿದೆ. ಈ ಮೂಲಕ ಆಂಧ್ರದಲ್ಲಿ ಕುಗ್ಗಿರುವ ಪಿಆರ್ ಪಿ ಜನಪ್ರಿಯತೆಯನ್ನು ಎತ್ತಿ ಹಿಡಿಯಲು ಚಿರಂಜೀವಿ ಯೋಜಿಸಿದ್ದಾರೆ.
ಕಾಂಗ್ರೆಸ್ ಜತೆ ಕೈ ಜೋಡಿಸಿರುವ ಪ್ರಜಾರಾಜ್ಯಂ ಪಕ್ಷಕ್ಕೆ ಇನ್ನೂ ಆಂಧ್ರಪ್ರದೇಶದಲ್ಲಿ ಗಟ್ಟಿನೆಲೆ ಸಿಕ್ಕಿಲ್ಲ. ಕಾಂಗ್ರೆಸ್ ನಾಯಕರು ಕೂಡಾ ಎರಡನೇ ದರ್ಜೆ ಸಹದ್ಯೋಗಿಗಳಂತೆ ಕಾಣುತ್ತಿರುವುದು ಸುಳ್ಳಲ್ಲ.