ಶಾಸಕ ವಿಶ್ವನಾಥರ 'ಅಪೂರ್ವ ಲೋಕ'ದಲ್ಲಿ ಏನಿತ್ತು?
ಇನ್ನು ಅವರು ತಮ್ಮ ಮನೆಗಳಿಗೆ ಇಟ್ಟಿರುವ ಹೆಸರೂ ಅಪೂರ್ವವಾಗಿಯೇ ಇವೆ. ನಿನ್ನೆ ಲೋಕಾಯುಕ್ತರು ದಾಳಿ ನಡೆಸಿದ ಒಂದು ಮನೆಯ ಹೆಸರು ಅಪೂರ್ವ ಲೋಕ. ಉಳಿದಂತೆ ಲೋಕ ಪ್ರಿಯ ಮುಂತಾದ ಹೆಸರುಗಳೂ ಇವೆ. ದುರ್ದೈವ ಅಂದರೆ ಈ ಭರ್ಜರಿ ಬಂಗಲೆಗಳು ಲೋಕಾಯುಕ್ತರಿಗೂ ಪ್ರಿಯವಾಗಿವೆ. ಈ ಬಂಗಲೆಗಳ ಹೆಸರಿಲ್ಲಿ ನಮ್ಮ 'ಲೋಕ'ವಿದೆ. ಒಳಗೆ ಏನಿದೆಯೋ ಎಂಬ ಕೆಟ್ಟ ಕುತೂಹಲದಿಂದ ಒಮ್ಮೆ ಹಾಗೇ ಒಳಗೆಲ್ಲ ಅಡ್ಡಾಡಿಕೊಂಡು ಬಂದವರೇ ಭರ್ಜರಿ ಫಸಲನ್ನೇ ಕಿತ್ತಿದ್ದಾರೆ.
1.1 ಕೆಜಿ ಚಿನ್ನ, 11 ಕೆಜಿ ಬೆಳ್ಳಿ, 14.45 ಲಕ್ಷ ನಗದು, 2500 ಯುಎಸ್ ಡಾಲರ್, ಕಾಫಿ ಬೋರ್ಡ್ ಲೇಔಟ್ನಲ್ಲಿ ಎರಡು ಫ್ಲ್ಯಾಟ್, ರಾಜಾನುಕುಂಟೆಯಲ್ಲಿ ಎರಡು ಕಟ್ಟಡ, ಭುವನೇಶ್ವರಿ ನಗರದಲ್ಲಿ ಎರಡು ಕಟ್ಟಡ, 65 ಎಕರೆ ಕೃಷಿ ಜಮೀನು, 40 ಲಕ್ಷ ರೂ. ಗೃಹೋಪಯೋಗಿ ವಸ್ತುಗಳು, 1 ಟೊಯೋಟಾ ಇನೋವಾ, 1 ಟೊಯೋಟಾ ಫಾರ್ಚೂನ್, 4 ಟ್ರ್ಯಾಕ್ಟರುಗಳು. ಇನ್ನು, ವಿಶ್ವನಾಥ್ ಪತ್ನಿ ಅಧ್ಯಕ್ಷೆಯಾಗಿರುವ ರೈತ ಸೇವಾ ಸಹಕಾರ ಬ್ಯಾಂಕ್ನಲ್ಲಿ ಅವರ ಹೆಸರಿನಲ್ಲಿ ಎರಡು ಲಾಕರುಗಳಿವೆ ಎಂದು ಲೋಕಾಯುಕ್ತ ಮೂಲಗಳು ಇಳಿಸಿವೆ.
ಅದಕ್ಕೂ ಮುನ್ನ ಲೋಕಾಯುಕ್ತಕ್ಕೆ ಸಲ್ಲಿಸಿದ ದೂರಿನಲ್ಲಿ ಯಲಹಂಕ ನಿವಾಸಿ ವಿ. ಶಶಿಧರ್ ಅವರು ನೀಡಿರುವ ವಿಶ್ವನಾಥರ ಆಸ್ತಿಪಾಸ್ತಿ ವಿವರ ಹೀಗಿದೆ, ಓದಿಕೊಳ್ಳಿ:
ವಿಧುರಾಶ್ವಥದಲ್ಲಿ 125 ಎಕರೆ ಕೃಷಿ ಭೂಮಿ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಮಂಚೇನಹಳ್ಳಿ ಹೋಬಳಿ ವರಗಳಿಯಲ್ಲಿ 110 ಎಕರೆ ಜಮೀನು, ನಾಗಶೆಟ್ಟಿಹಳ್ಳಿಯಲ್ಲಿ ಅಪಾರ್ಟ್ ಮಂಟ್ ಹೊಂದಿದ್ದಾರೆ.
ಅಲ್ಲದೆ ಅಪರಾಧ ಹಿನ್ನೆಲೆಯುಳ್ಳ ಸತೀಶ್ ಎಂಬುವವರ ಹೆಸರಿನಲ್ಲಿ ಕೊಡಿಗೇನಹಳ್ಳಿಯಲ್ಲಿ, ಹೃದರಾಬಾದ್ ಹೈವೇಗೆ ಅಂಟಿಕೊಂಡಿರುವ ಗಂಗಾಧರೇಶ್ವರ ಕಲ್ಯಾಣ ಮಂಟಪ ಹೊಂದಿರುವ ಮಾಹಿತಿಯೂ ಇದೆ. ಈ ಆಸ್ತಿಪಾಸ್ತಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಶಶಿಧರ್ ಅವರು ಹೇಳಿದ್ದಾರೆ.