ಸಚಿವೆ ಶೋಭಾ ಜೊತೆ ಯಡಿಯೂರಪ್ಪ ಸೋಮಯಾಗ
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದರ್ಶನ ಪಡೆದ ನಂತರ ಕಟೀಲು ಸಮೀಪದ ಶಿಬರೂರಿಗೆ ತೆರಳಿದ್ದರು. ಬಿಎಸ್ ವೈ ಪಡೆ ಸೋಮವಾರದ ಶುಭ ಮುಹೂರ್ತದಲ್ಲಿ ಕಲ್ಲಡ್ಕದ ನರಹರಿ ಪರ್ವತ ತಪ್ಪಲಿನಲ್ಲಿ ವಾಜಪೇಯ ಸೋಮಯಾಗ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಅವರ ಬಲ ಬದಿಯಲ್ಲಿ ಸಚಿವೆ ಶೋಭ ಕರಂದ್ಲಾಜೆ ಅವರು ಎಡಬದಿಯಲ್ಲಿ ಶಾಸಕಿ ಭಾರತಿ ಶೆಟ್ಟಿ ಅವರು ಕುಳಿತು ಯಜ್ಞ ಕುಂಡಕ್ಕೆ ಹವಿಸ್ಸು ಅರ್ಪಿಸುತ್ತಿದ್ದಾರೆ.
ಚಿಕ್ಕಮಗಳೂರಿನ ವೇದ ವಿದ್ವಾಂಸ ಕೆ.ಎಸ್. ನಿತ್ಯಾನಂದ ಅವರ ನೇತೃತ್ವದಲ್ಲಿ ಋತ್ವಿಕರು 28 ದಿನಗಳ ಕಾಲದ ಈ ಯಾಗವನ್ನು ಸಕಲ ಭಯಭಕ್ತಿಗಳಿಂದ ಪೂರೈಸಲಿದ್ದಾರೆ.
'ಯಾಗದ ನಂತರ ನನ್ನ ಕಷ್ಟಗಳೆಲ್ಲ ದೂರಾಗಲಿದೆ ಎಂಬ ನಂಬಿಕೆ ನನಗಿದೆ' ಎಂದು ಯಡಿಯೂರಪ್ಪ ಹೇಳಿದ್ದಾರೆ.
ಆದರೆ, ವೈದಿಕ ವಿದ್ವಾಂಸರ ಪ್ರಕಾರ ಸ್ವಾರ್ಥಕ್ಕಾಗಿ ಮಾಡುವ ಯಾವ ಯಾಗವೂ ಫಲ ನೀಡುವುದಿಲ್ಲ. ಯಾಗದ ನಿಜವಾದ ಅರ್ಥವೇ ಎಲ್ಲವನ್ನೂ ಅರ್ಪಿಸುವುದು. ಲೋಕ ಕಲ್ಯಾಣಕ್ಕಾಗಿ ಯಾಗ ಮಾಡಿದರೆ ಅಷ್ಟೋ ಇಷ್ಟೋ ಫಲ ಸಿಗುತ್ತದೆ ಎನ್ನಬಹುದು.
ಆದರೆ, ಯಾಗ ಮಾಡಿ ಸಿಎಂ ಆಗುತ್ತೀನಿ ಎನ್ನುವುದು ಎಲ್ಲೋ ಅವರಿಗೆ ಭ್ರಾಂತು ಎಂದು ವೇ.ಬ್ರ.ಶ್ರೀ ಕೆ. ಶೇಷಾದ್ರಿ ಅವರು ಖಾಸಗಿ ವಾಹಿನಿಯೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.