ಮುಖೇಶ್ ಅಂಬಾನಿ ವಿರುದ್ಧ ಅರೆಸ್ಟ್ ವಾರೆಂಟ್
ಮೊಬೈಲ್ ಗ್ರಾಹಕರೊಬ್ಬರ ದೂರಿನನ್ವಯ ಈ ವಾರೆಂಟನ್ನು ಹೊರಡಿಸಲಾಗಿದೆ. 2003 ರಲ್ಲಿ ಎಂ.ಜೋಸೆಫ್ ಎಂಬ ಗ್ರಾಹಕರೊಬ್ಬರು ರಿಲಾಯನ್ಸ್ ಇನ್ಫೋಕಾಮ್ ಮೊಬೈಲನ್ನು 24,000 ರೂ ಗೆ ಖರೀದಿಸಿದ್ದರು. ಈ ಮೊಬೈಲ್ ನೊಂದಿಗೆ ಉಚಿತ ಹೊರ ಕರೆ, ಎಸ್ ಎಂಎಸ್ ಮುಂತಾದ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಎಷ್ಟೋ ಪ್ರಯತ್ನದ ನಂತರವೂ ಯಾವುದೇ ಸೌಲಭ್ಯಗಳು ಇವರಿಗೆ ಲಭಿಸಿರಲಿಲ್ಲ.
2005 ರಲ್ಲಿ ಈ ಕಾರಣಕ್ಕಾಗಿ ತ್ರಿಶೂರ್ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ಮೊಕದ್ದಮೆ ಹೂಡಲಾಯಿತು. ಜೋಸೆಫ್ ಅವರ ಪರವಾಗಿ ವಕೀಲ ಸೆಬಿ.ಜೆ.ಪುಲ್ಲೆ ಅವರು ವಾದ ನಡೆಸಿದ್ದರು. ಜೋಸೆಫ್ ಪರ ತೀರ್ಪಿತ್ತ ನ್ಯಾಯಾಲಯ ರಿಲಾಯನ್ಸ್ ಇನ್ಫೊಕಾಮ್ ಗೆ 24,000ರೂ ಜೊತೆ ಶೇಕಡಾ 12 ರಷ್ಟು ಬಡ್ಡಿ ಸೇರಿಸಿ ಕೊಡುವಂತೆ ಆದೇಶಿಸಿತ್ತು.
ಆದರೆ ವರ್ಷ ಕಳೆದ ನಂತರವೂ ಯಾವುದೇ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಮತ್ತೆ ಜೋಸೆಫ್ 2011ರ ಮಾರ್ಚ್ ತಿಂಗಳಿನಲ್ಲಿ ಕೋರ್ಟ್ ಮೊರೆಹೋಗಿದ್ದು, ಇದೀಗ ತ್ರಿಶೂರ್ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಅಧ್ಯಕ್ಷ ಪದ್ಮಿನಿ ಸುಧೀಶ್ ಮುಖೇಶ್ ಅಂಬಾನಿ ವಿರುದ್ಧ ಅರೆಸ್ಟ್ ವಾರೆಂಟ್ ಹೊರಡಿಸಿದ್ದಾರೆ. ಜೊತೆಗೆ ಫೆಬ್ರುವರಿ 15 ರೊಳಗೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಲಾಗಿದೆ.