ಪ್ರಸನ್ನ ವಿರುದ್ಧ ಕಾನೂನು ಕ್ರಮ - ಕರವೇ
ಆಧಾರವಿಲ್ಲದ ಆಪಾದನೆಗಳನ್ನು ಹೊರೆಸುವುದರ ಮೂಲಕ ನಾರಾಯಣಗೌಡರ ಮುಖಕ್ಕೆ ಮಸಿ ಬಳಿಯಲು ಯತ್ನಿಸುತ್ತಿರುವ ಪ್ರಸನ್ನ ಮತ್ತು ಅವರ ಗ್ಯಾಂಗನ್ನು ಬಗ್ಗು ಬಡಿಯಲಾಗುವುದು ಎಂದು ಕರವೇ ಸಂಘಟನೆ ಶುಕ್ರವಾರ ಮಧ್ಯಾನ್ಹ ಎಚ್ಚರಿಸಿದೆ.
ಇಂದು ಬೆಳಗ್ಗೆ ದಟ್ಸ್ ಕನ್ನಡದಲ್ಲಿ ಪ್ರಕಟವಾದ "ಗೌಡರು ಕೋಟಿಗಟ್ಟಳೆ ಹಣ ಮಾಡಿಕೊಂಡಿದ್ದಾರೆ" ಎಂಬ ವರದಿ ಕಂಡು ದೂರವಾಣಿ ಮೂಲಕ ನಮ್ಮ ವರದಿಗಾರರನ್ನು ಸಂಪರ್ಕಿಸಿದ ಗೌಡರ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಅವರು ಪ್ರಸನ್ನ ಅವರ ಆಪಾದನೆ ದುರುದ್ದೇಶ ಪೂರಕವಾಗಿದೆ ಎಂದು ಕೆಂಡಕಾರಿದರು.
ಜಯದೇವ ಪ್ರಸನ್ನ ಅವರ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ. ಇವರೆಲ್ಲ ಯಾರು, ಇವರ ಹುನ್ನಾರ ಏನು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಅವರನ್ನು ಸುಮ್ಮನೆ ಬಿಡಲ್ಲ, ಇವರ ಬೇಳೆಕಾಳು ನಮ್ಮ ಹತ್ರ ಬೇಯಲ್ಲ ಎಂದು ಕರವೇ ಪ್ರಧಾನ ಕಾರ್ಯದರ್ಶಿ ಸಣ್ಣೀರಪ್ಪ ಗುಡುಗಿದರು.
ಕರವೇ ಎಂಥ ಸಂಸ್ಥೆ ಎನ್ನುವುದು ಇಡೀ ಜಗತ್ತಿಗೇ ಗೊತ್ತು. ಕನ್ನಡಕ್ಕಾಗಿ ಹಲವು ಹತ್ತು ಚಳವಳಿಗಳನ್ನು ನಡೆಸಿದ ಮತ್ತು ನಡೆಸುತ್ತಿವ ಕರವೇ ಪ್ರಯತ್ನದಿಂದ ಬೆಳಗಾವಿ ಕಾರ್ಪೋರೇಶನ್ ವಿಸರ್ಜನೆ ಆಗಿರುವುದು ಇತ್ತೀಚಿನ ಸಾಧನೆ ಎಂದು ಸಣ್ಣೀರಪ್ಪ ಹೆಮ್ಮೆಯಿಂದ ಹೇಳಿದರು.