ಸಾಂಬಾರಲ್ಲಿ ಬಿದ್ದು ಗಾಯಗೊಂಡಿದ್ದ ಅಪೂರ್ವ ಇನ್ನಿಲ್ಲ
ಮೈಸೂರು ಜಿಲ್ಲೆ ಎಚ್ ಡಿ ಕೋಟೆಯ ಕಟ್ಟೆ ಹೊಸೂರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ 6 ವರ್ಷದ ಅಪೂರ್ವ ಬುಧವಾರ ಮಧ್ಯಾಹ್ನದ ಬಿಸಿಯೂಟಕ್ಕೆ ಸರತಿಯ ಸಾಲಿನಲ್ಲಿ ನಿಂತಿದ್ದಾಗ ಅಕಸ್ಮಾತಾಗಿ ಕುದಿಯುತ್ತಿದ್ದ ಸಾಂಬಾರಿನಲ್ಲಿ ಬಿದ್ದಿದ್ದಳು. ಆಕೆಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದವು.
ಈ ಘಟನೆಯ ಹಿನ್ನೆಲೆಯಲ್ಲಿ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಿದ ಮುಖ್ಯ ಶಿಕ್ಷಕಿ ಮತ್ತು ಮೂವರು ಸಿಬ್ಬಂದಿಯನ್ನು ಕೆಲಸದಿಂದ ಅಮಾನತು ಮಾಡಲಾಗಿದೆ. ಮಕ್ಕಳನ್ನು ಸಾಲಿನಲ್ಲಿ ಕೂಡಿಸಿ ಊಟ ಹಾಕುವ ಬದಲು ಸರತಿಯಲ್ಲಿ ನಿಲ್ಲಿಸಿ ಊಟ ಹಾಕಲಾಗುತ್ತಿತ್ತು. ಆ ಸಂದರ್ಭದಲ್ಲಿ ನಾಮುಂದು ತಾಮುಂದು ಎನ್ನುವಾಗ ಸಾಂಬಾರಿದ್ದ ದೊಡ್ಡ ಪಾತ್ರೆಗೆ ಅಪೂರ್ವ ಬಿದ್ದುಬಿಟ್ಟಿದ್ದಳು.
ಅಪೂರ್ವಳ ಸಾವಿನಿಂದ ತತ್ತರಿಸಿರುವ ಆಕೆಯ ತಾಯಿ ಮಾದೇವಿಯ ಗೋಳು ಕರಳು ಕಿತ್ತುಬರುವಂತಿದೆ. ಗಂಡ ಕುಡುಕನಾಗಿದ್ದರಿಂದ ಮನೆಯಲ್ಲಿ ದುಡಿಯುವ ಮತ್ತು ಮಗಳನ್ನು ಓದಿಸಿ ಬೆಳೆಸುವ ಜವಾಬ್ದಾರಿಯನ್ನು ತಾಯಿಯೇ ಹೊತ್ತಿದ್ದಳು. ಎರಡು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದು ಮಗಳ ಆರೈಕೆ ನಡೆಸಿದ್ದ ಮಾದೇವಿಗೆ ಈಗ ಬರಸಿಡಿಲು ಬಡಿದಂತಾಗಿದೆ.