ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಕ್ತ ತಂತ್ರಾಂಶ ಪ್ರೋತ್ಸಾಹ ಕೇರಳವೇ ಮಾದರಿ!

By Mahesh
|
Google Oneindia Kannada News

OmShivaraPrakash
ಕೇರಳದ ರಾಜ್ಯ ವಿದ್ಯುತ್ ನಿಗಮ ತನ್ನ ಕಾರ್ಯಚಟುವಟಿಕೆಗಳಿಗೆ ಬೇಕಾದ ತಂತ್ರಾಂಶವನ್ನು 2006ರಲ್ಲೇ ತನ್ನದೇ ತಾಂತ್ರಿಕ ವರ್ಗದಿಂದ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳನ್ನು ಬಳಸಿಕೊಡು ಅಭಿವೃದ್ಧಿ ಪಡಿಸಿಕೊಂಡಿದೆ.

ಕೇವಲ 30 ಸಾವಿರಗಳನ್ನು ವ್ಯಯಿಸಿ ತನ್ನೆಲ್ಲ ಸಿಬ್ಬಂದಿಯನ್ನುತರಬೇತುಗೊಳಿಸಿ, ಖಜಾನೆಯಿಂದ ತಂತ್ರಜ್ಞಾನ ಖರೀದಿಗೆ ಹರಿದು ಹೋಗಬಹುದಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ಉಳಿಸಿಕೊಂಡಿದೆ.

ಇದಕ್ಕಿಂತಲೂ ಹೆಚ್ಚಾಗಿ 7-8 ಕೋಟಿ ರೂಪಾಯಿಗಳ ಉಳಿತಾಯ ಕೇವಲ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳನ್ನು ಬಳಸುವುದರಿಂದಲೇ ವಿದ್ಯುತ್ ನಿಗಮಕ್ಕೆ ಆಗುತ್ತಿದೆ.

ನಷ್ಟದ ಲೆಕ್ಕಾಚಾರವನ್ನು ತೋರಿಸುವ ನಮ್ಮ ಕೆಲ ಸಂಘ ಸಂಸ್ಥೆಗಳು ಇದನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು, ಕನ್ನಡದ ತಾಂತ್ರಿಕ ವರ್ಗಕ್ಕೆ ಹೊಸ ಸ್ತರದ ಕೆಲಸವನ್ನು ವಹಿಸುವುದರ ಜೊತೆಗೆ ಕೋಟ್ಯಾಂತರ ರೂಪಾಯಿ ಹಣದ ಪೋಲನ್ನು ತಡೆಯಬಹುದು.

ಕರ್ನಾಟಕದಲ್ಲಿ ಏನಾಗಿದೆ?: ಸರ್ಕಾರವೂ ಕನ್ನಡ ಜನತೆ ಕನ್ನಡದಲ್ಲೇ ಬಳಸ ಬಹುದಾದಂತಹ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು, ಯುನಿಕೋಡ್ ಶಿಷ್ಟತೆಯನ್ನು ಅಳವಡಿಸಲು ಕನ್ನಡಿಗರ ಪರವಾಗಿ ಸುತ್ತೋಲೆಯನ್ನು ಹೊರಡಿಸುವುದರ ಮೂಲಕ ಮೈಕ್ರೋಸಾಫ್ಟ್ ಹಾಗೂ ಇತರೆ ಬಹುರಾಷ್ಟ್ರೀಯ ಸಂಸ್ಥೆಗಳು ಕನ್ನಡದಲ್ಲಿನ ತಾಂತ್ರಿಕ ದೋಷಗಳನ್ನು ಸರಿಪಡಿಸುವ ಒತ್ತಡ ಹೇರಲು ಸಾಧ್ಯವಿದೆ.

ಈಗಾಗಲೇ ಖರೀದಿಸಿರುವ ತಂತ್ರಾಂಶಗಳಿಗೂ ಇದು ಅನ್ವಯವಾಗುವಂತೆ ಮಾಡಬಹುದು. ವೆಬ್, ಮೊಬೈಲ್, ನೆಟ್ ಬುಕ್, ಟಚ್‌ಪ್ಯಾಡ್ ಹೀಗೆ ದಿನೇ ದಿನೇ ಬದಲಾಗುತ್ತಿರುವ ತಂತ್ರಜ್ಞಾನಗಳಲ್ಲಿ ಒಮ್ಮತದ ಶಿಷ್ಟತೆಗಳನ್ನು/ಏಕರೂಪತೆಗಳನ್ನು ತರಲು ಸಮುದಾಯ ಹಾಗೂ ಪರಿಣಿತರ ಸಂಘಟನೆಗೆ ಮುಂದಾಗಬೇಕು, ಸ್ವಾಯತ್ತ ಸಮಿತಿಯ ರಚನೆಯಾಗಬೇಕು.

ಇದು ವರ್ಷಾನು ವರ್ಷಗಳಿಂದ ಮುಂದು ಕಾಡುತ್ತಿರುವ ಯುನಿಕೋಡ್, ಮೊಬೈಲ್ ಹಾಗು ವೆಬ್ ನಲ್ಲಿನ ತೊಂದರೆ ಇತ್ಯಾದಿಗಳ ಶೀಘ್ರ ಪರಿಶೀಲನೆ ಮತ್ತು ಪರಿಹಾರಕ್ಕೆ ಮುಂದಾಗಲು ಸಹಾಯಕವಾಗುತ್ತದೆ. ಸರ್ಕಾರೀ ವೆಬ್‌ಸೈಟ್ ಗಳು ಯುನಿಕೋಡ್ ನಲ್ಲಿ ಬಂದರೆ ಸುಲಭವಾಗಿ ಅದು ಜನರನ್ನು ತಲುಪಲಿದೆ.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ: ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ (ಓಪನ್ ಸೋರ್ಸ್) ತಂತ್ರಾಂಶಗಳ ಬಳಕೆಗೆ ಉತ್ತೇಜನ ನೀಡುವುದಲ್ಲದೆ. ಪ್ರಾಯೋಗಿಕ ಬಳಕೆಗೆ ಮತ್ತು ಕಲಿಕೆಗೆ ಮುನ್ನುಡಿ ಬರೆಯಬೇಕು.

ಈ ಕೆಲಸಗಳು ಕನ್ನಡಿಗರ ಸಮುದಾಯಗಳನ್ನು ಒಳಗೊಂಡರೆ, ಸರ್ಕಾರದ ಕಾರ್ಯಗಳು ಸುಲಭವಾಗಿ, ವೇಗವಾಗಿ ನೆರವೇರುವ ಸಾಧ್ಯತೆಗಳಿವೆ. ಸಮುದಾಯ ಮಟ್ಟದಲ್ಲಿ ಕನ್ನಡ ನಾಡು, ನುಡಿಗೆ ಕೆಲಸಮಾಡುವವರ ಜೊತೆಗೆ ತಂತ್ರಜ್ಞಾನದ ಮೇಲೆಯೂ ಆಸಕ್ತಿವಹಿಸಿ ಕೆಲಸ ಮಾಡುವವರಿಗೆ ಮತ್ತು ಅಂತಹ ಸಮುದಾಯಗಳನ್ನು ಗುರುತಿಸಿ ತಂತ್ರಜ್ಞಾನ ಅಭಿವೃದ್ಧಿಗೆ ಬೇಕಾದ ಸಹಾಯ ಹಸ್ತ ಚಾಚುವುದು.

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಅಳವಡಿಕೆ ಮತ್ತು ತಂತ್ರಾಂಶ ಅಭಿವೃದ್ಧಿಯನ್ನು ರೂಢಿಸಿಕೊಳ್ಳುವುದರಿಂದ ಜನ ಸಮುದಾಯಗಳನ್ನು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾಗವಹಿಸುವಂತೆ ಮಾಡಬಹುದು.

ಈ ಮೂಲಕ ಯುವಕರನ್ನು ಕನ್ನಡಕ್ಕೆ ಮಾಹಿತಿ ತಂತ್ರಜ್ಞಾನದ ಮೂಲಕ ಸೇವೆಸಲ್ಲಿಸಲು ಹುರಿದುಂಬಿಸಬಹುದು. ಹಳೆಯ, ಮತ್ತು ಇನ್ಮುಂದೆ ಉಪಯೋಗಕ್ಕೆ ಬಾರದ ತಂತ್ರಜ್ಞಾನಗಳ ಬಳಕೆಯನ್ನು ಕಾಲಕಾಲಕ್ಕೆ ತಡೆಗಟ್ಟಿ, ಅತ್ಯಾಧುನಿಕ ಮತ್ತು ಸುರಕ್ಷಿತ ತಂತ್ರಜ್ಞಾನಗಳನ್ನು ಆಡಳಿತದಲ್ಲಿ ಬಳಸಿಕೊಳ್ಳಲು ಕೂಡ ಸಮುದಾಯದೊಡಗಿನ ಬಾಂಧವ್ಯ ಸರ್ಕಾರಕ್ಕೆ ನೆರವಾಗಲಿದೆ.

ಜೊತೆಗೆ ಇತ್ತೀಚೆಗೆ ICAAN ತರಲಿಚ್ಚಿಸುತ್ತಿರುವ ಇಂಟರ್ನ್ಯಾಷನಲ್ ಡೊಮೈನ್ ನೇಮ್ (IDN) ನಲ್ಲಿ ಕನ್ನಡವಿಲ್ಲ. ಭಾರತೀಯ ಭಾಷೆಗಳ ಡೊಮೈನ್ ಹೆಸರುಗಳನ್ನು ಹೊರತರುವ ಮೊದಲ ಪಟ್ಟಿಯಲ್ಲಿ ಕನ್ನಡವಿದ್ದು, ನಂತರದ ಪಟ್ಟಿಗಳಲ್ಲಿ ಕನ್ನಡವನ್ನು ಕೈ ಬಿಡಲಾಗಿದೆ.

ಕನ್ನಡ ತಂತ್ರಜ್ಞಾನ, ಭಾಷೆ ಇತ್ಯಾದಿಗಳ ಅಭಿವೃದ್ಧಿಗೆ ಎಲ್ಲ ಸಂಘಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುವಂತಿದ್ದಿದ್ದರೆ, ಇಂತಹ ಒಂದು ಅಚಾತುರ್ಯವನ್ನು ಮೊದಲ ಹಂತದಲ್ಲೇ ತಪ್ಪಿಸಬಹುದಿತ್ತೇನೋ.

ಕಮ್ಯೂನಿಟಿ ಪಾರ್ಟಿಸಿಪೇಷನ್/ಸಮುದಾಯ ಸಹಭಾಗಿತ್ವ, ನಮಗೆ ಬೇಕಿರುವ ಸಾಫ್ಟವೇರ್ ನಾವೇ ಸೃಷ್ಟಿಸಿಕೊಳ್ಳುವುದು, ಅದನ್ನು ನಮ್ಮದೇ ಉದ್ಯೋಗಗಳಿಗೆ ಬಳಸಿಕೊಳ್ಳುವುದು, ಟೆಕ್ನಾಲಜಿಯನ್ನು ಬೆಳಸಿ ದೊಡ್ಡ ಕಂಪೆನಿಗಳಿಗೆ ಅದನ್ನು ಕನ್ನಡದ ನೆಲದಿಂದಲೇ ಕೊಡುವಂತೆ ಮಾಡುವುದು.

ಜಿ.ಪಿ.ಎಲ್ ಲೈಸೆನ್ಸ್ ಮೂಲಕ ಕನ್ನಡಿಗರ ತಂತ್ರಜ್ಞಾನವನ್ನು ಕನ್ನಡಿಗರ ಕೈ ನಲ್ಲೇ ಇರುವಂತೆ ಮಾಡಿ ನಮ್ಮನ್ನು ನಾವೇ ಸದೃಡಗೊಳಿಸಿಕೊಳ್ಳುವುದು. ಒಡೆದು ಹಂಚಿಹೋಗಿರುವ ಕನ್ನಡದ ಅನೇಕ ಬಣಗಳು ಒಂದಾಗಿ, ಕನ್ನಡಕ್ಕೆ ಬೇಕಿರುವ ಮಾಹಿತಿ ಮತ್ತು ತಂತ್ರಜ್ಞಾನದ ಬಗ್ಗೆ ಒಕ್ಕೊರಲಿನ ದನಿ ಎತ್ತಿ, ಅವುಗಳ ಅಭಿವೃದ್ಧಿಗೆ ನಾಂದಿ ಹಾಡುವುದು.

ಕನ್ನಡ ವಿಕ್ಷನರಿ - ವಿಕಿಪೀಡಿಯಾ ಗಳಂತಹ ಸಮುದಾಯ ಆಧಾರಿತ ಯೋಜನೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು, ಅದರ ಬಹುಮುಖ ಉಪಯೋಗವನ್ನು ಪಡೆಯುವುದು. ಹಳೆಯ ಪುಸ್ತಕಗಳು, ಕಾಪಿರೈಟ್ ಮುಗಿದ ಕನ್ನಡ ಪಠ್ಯ ಇತ್ಯಾದಿ, ಯುನಿವರ್ಸಿಟಿಯ ಯಾವುದೋ ಕಪಾಟಿನಲ್ಲಿರುವುದಕ್ಕಿಂತ ಅಮೇಜಾನ್ ಕಿಂಡಲಿನಲ್ಲಿ ದೊರೆಯುವ ಯಾವುದೋ ಶತಮಾನದ ಪುಸ್ತಕವಾದರೆ, ಕನ್ನಡಿಗ ತನ್ನ ಮೊಬೈಲ್, ಕಂಪ್ಯೂಟರುಗಳಲ್ಲಿ ತನಗೆ ಬೇಕೆನಿಸಿದ ಸಾಹಿತ್ಯವನ್ನು ಅಭ್ಯಸಿಸಲು ಅನುವು ಮಾಡಿಕೊಟ್ಟಂತಾಗುತ್ತದೆ.

ಗುಟೆನ್ ಬರ್ಗ್ ಪ್ರಾಜೆಕ್ಟ್ ಮಾದರಿ: ಗುಟೆನ್ ಬರ್ಗ್ ನಂತಹ ಯೋಜನೆಗಳನ್ನು ಕನ್ನಡಿಗ ಕೈಗೆತ್ತಿ ಕೊಂಡು, ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಮರುಮುದ್ರಣ ಕಾಣದೆ ಕಳೆದು ಹೋಗುತ್ತಿರುವ ಜ್ಞಾನದ ಆಗರವನ್ನು ಜಗತ್ತಿಗೆ ತೆರೆದಿಡಬಹುದು. ಹೀಗೆ ಹತ್ತು ಹಲವಾರು ವಿಧಗಳಲ್ಲಿ ಕನ್ನಡಿಗರು ಸಂಘಟಿತರಾಗಿ ತಮಗೆ ತಾವೇ ತಂತ್ರಜ್ಞಾನ ಮಟ್ಟದಲ್ಲಿ ಆಸರೆಯಾಗಬಹುದು.

ಈ ಸಂದರ್ಭದಲ್ಲಿ ನಿಮಗೊಂದು ಮಾಹಿತಿ - ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ವೆಬ್‌ಸೈಟ್‌ನಲ್ಲಿ ಇದುವರೆಗೂ 35 ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ಹಾಕಲಾಗಿತ್ತು. ಆದರೆ ಇತ್ತೀಚೆಗೆ ಅದರ ಸಂಖ್ಯೆ 3300 ರ ಆಸು ಪಾಸಿಗೆ ಇಳಿದಿದೆ. ಕನ್ನಡಿಗರೇ ಇಂತಹ ಯೋಜನೆಗಳ ಲಾಲನೆ ಪಾಲನೆಗೆ ಮುಂದಡಿ ಇಟ್ಟರೆ ಇಂತಹ ನಷ್ಟಗಳನ್ನು ತಪ್ಪಿಸಬಹುದಲ್ಲವೇ?

ನಾವು ಒಟ್ಟಾಗ ಬೇಕು, ಮಕ್ಕಳಿಂದ ಹಿಡಿದು ಮುದುಕರವರೆಗೆ. ನಾವು ಉಪಯೋಗಿಸುವ ಗಡಿಯಾರದಿಂದಿಡಿದು ಟಚ್‌ಪ್ಯಾಡಿನವರೆಗೆ ಎಲ್ಲದರಲ್ಲೂ ಕನ್ನಡ ಕೆಲಸ ಮಾಡುತ್ತದೆಯೇ ಕೇಳಬೇಕು.

ಇಲ್ಲವಾದಲ್ಲಿ ಅದನ್ನು ನಾವೇ ಅಳವಡಿಸುವ ಕೆಲಸ ಮಾಡಬೇಕು. ತಂತ್ರಜ್ಞಾನ ಕಲಿಕೆ ಕಲಿಯುವಷ್ಟು ದಿನ ಕಷ್ಟ ನಂತರ ಬಹಳ ಸುಲಭವೇ. ಕನ್ನಡಕ್ಕೆ ಬೇಕಾದ ತಂತ್ರಾಂಶಗಳು ಮತ್ತು ತಂತ್ರಜ್ಞಾನ ನುಡಿ, ಬರಹದಂತಹ ತಂತ್ರಾಂಶಗಳ ಚೌಕಟ್ಟನ್ನು ಮೀರಿದ್ದು. ಇವುಗಳನ್ನು ಅಭಿವೃದ್ದಿ ಪಡಿಸುವ ಜವಾಬ್ದಾರಿ ನಮ್ಮ.

ಕನ್ನಡಿಗರ ಸಮುದಾಯ ಇದಕ್ಕಾಗಿ ಯಾರನ್ನೋ ಕಾಯುತ್ತಾ ಕೂರುವುದರ ಬದಲು, ಮುಂದಡಿ ಇಡುವುದು ಒಳಿತು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಅದೆಷ್ಟೋ ಯೋಜನೆಗಳು ನಮ್ಮ ಭಾಷೆಗೆ ಬೇಕಿರುವ ತಂತ್ರಾಂಶಗಳ ಆಗರವನ್ನೇ ಒಂದಿವೆ. ಅವುಗಳನ್ನು ಕನ್ನಡಕ್ಕೆ ಒಗ್ಗಿಸಿಕೊಳ್ಳಬೇಕಷ್ಟೇ.

ಕಂಪ್ಯೂಟರ್ ಕಲಿಯಬೇಕೆಂದಿರುವ ಹೊಸಬರಿಂದ ಹಿಡಿದು ತಂತ್ರಜ್ಞಾನ ನಿಪುಣರವರೆಗೆ ಎಲ್ಲರೂ ಒಂದಲ್ಲಾ ಒಂದು ಕೆಲಸವನ್ನು ವಹಿಸಿಕೊಂಡು, ಭಾಷಾ ತಂತ್ರಜ್ಞರು, ವಿದ್ವಾಂಸರು ಇತರರ ಜೊತೆಗೂಡಿ ಕನ್ನಡಕ್ಕೆ ಬೇಕಿರುವ ತಂತ್ರಾಂಶಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬಹುದು ಮತ್ತು ಅವುಗಳ ಉಪಯೋಗವನ್ನೂ ಪಡೆಯಬಹುದು. ತಂತ್ರಜ್ಞಾನದಲ್ಲೂ ಸ್ವಾವಲಂಬನೆ ಹೊಂದಬಹುದು.

ಮುಂಬರುವ ದಿನಗಳಲ್ಲಿ ಕನ್ನಡಕ್ಕೆ ಇಂತಹ ತಂತ್ರಜ್ಞಾನ ಇಲ್ಲ ಎಂದೆನ್ನದಿರುವ ದಿನವೂ ಬರಬಹುದು.

English summary
78th Kannada Sahitya Sammelna, Gangavathi: Seminar speech by Software techie OmShivaprakash on Information and technology with Kannada software future. Speech copy highlights on the day to day basis use of Kannada softwares and developments. Kerala government can be taken as role model to support free and open software development in e governance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X