ಕರವೇ ಒಳಜಗಳ ಬಹಿರಂಗ : ಗೌಡರ ಸಂದರ್ಶನ
ಈ ಕುರಿತು ಹೆಚ್ಚಿನ ವಿವರಗಳಿಗಾಗಿ ನಮ್ಮ ವರದಿಗಾರರು ನಾರಾಯಣ ಗೌಡರನ್ನು ಸಂಪರ್ಕಿಸಿದರು. ಮೈಸೂರಿನ ಸಂದೇಶ್ ಹೋಟೆಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತುರ್ತು ಸಭೆಯಲ್ಲಿ ಪಾಲ್ಗೊಂಡಿದ್ದ ಗೌಡರು, ತಮ್ಮ ಬಗ್ಗೆ ಪ್ರಕಟಿಸಲಾದ ಬಿಸಿಬಿಸಿ ಸುದ್ದಿಗೆ ಸ್ಪಷ್ಟೀಕರಣ ನೀಡಿದರು. ಅದರ ಸಾರಾಂಶ ಇಂತಿದೆ, ಓದಿ - ಸಂಪಾದಕ.
ಕರವೇ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಸನ್ನ ಸಂಘಟನೆಯ ಎಲ್ಲ ನೀತಿ ನಿಯಮಗಳನ್ನು ಗಾಳಿಗೆ ತೂರಿದ ವ್ಯಕ್ತಿ. ಕರವೇ ಹೆಸರು ಹೇಳಿಕೊಂಡು ಹಣ ವಸೂಲಿಗೆ ನಿಂತ ಸಂಘಟನೆಯ ದ್ರೋಹಿ. ಈತ ಮಾಡಬಾರದ್ದೆಲ್ಲ ಮಾಡಿ ಈಗ ನನ್ನನ್ನೇ ಉಚ್ಛಾಟಿಸಿರುವುದಾಗಿ ಹೇಳಿಕೆ ನೀಡಿದ್ದಾನೆ. ಉಚ್ಛಾಟನೆ ಮಾಡುವುದಕ್ಕೆ ಅಸಲು ಅವರಿಗೆ ಅಧಿಕಾರವೇ ಇಲ್ಲ.
ಕೋಲಾರದಲ್ಲಿ ಪ್ರಸನ್ನ ಆಡಿದ ಕನ್ನಡದ ಆಟಗಳು ಇಡೀ ಕನ್ನಡ ಸಂಘಟನೆಗೆ ಅಗೌರವ, ಅವಮಾನ ತರುವಂಥದ್ದಾಗಿದೆ. ಈತ ಕೋಲಾರ ಜಿಲ್ಲೆಯ ಜಲ್ಲಿ ಕ್ರಷರ್ ಮಾಲಿಕರ ಬಳಿ ಹೋಗಿ ಅವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ವಿನಾಯಕ ಜಲ್ಲಿ ಕ್ರಷರ್ ಕಂಪನಿಯಿಂದ ನನಗೆ ನೇರವಾಗಿ ದೂರು ಕೂಡ ಬಂದಿದೆ.
ಇದು ಒಂದು ಉದಾಹರಣೆಯಷ್ಟೆ. ಕನ್ನಡ ಮತ್ತು ಕರವೇ ಹೆಸರು ಹೇಳಿಕೊಂಡು ನಾಚಿಕೆಗೆಟ್ಟ ಕೆಲಸಕ್ಕೆ ಇಳಿದ ಇಂತಹ ವ್ಯಕ್ತಿಯ ಬಗ್ಗೆ ಹೆಚ್ಚು ಮಾತನಾಡಿ ನನ್ನ ನಾಲಿಗೆಯನ್ನು ಮಲಿನಗೊಳಿಸುವುದಿಲ್ಲ. ಆದ್ದರಿಂದಲೇ, ನಾವು ಇಂದು ಇಲ್ಲಿ ಸಭೆ ಸೇರಿದ್ದೇವೆ.
28 ಜಿಲ್ಲೆಗಳನ್ನು ಪ್ರತಿನಿಧಿಸುವ ಕರವೇ ಅಧ್ಯಕ್ಷರುಗಳು, 16 ಮಂದಿ ರಾಜ್ಯಮಟ್ಟದ ಪದಾಧಿಕಾರಿಗಳು ತುರ್ತು ಸಭೆ ಸೇರಿ ಜಯದೇವ ಪ್ರಸನ್ನ ಅವರನ್ನು ಕರವೇಯಿಂದ ವಿಧ್ಯುಕ್ತವಾಗಿ ಹೊರದಬ್ಬುವ ನಿರ್ಧಾರವನ್ನು ಕೈಗೊಂಡಿದ್ದೇವೆ.
ಈ ಮೂಲಕ ಸಮಸ್ತ ಕನ್ನಡಿಗರಿಗೆ ತಿಳಿಯಪಡಿಸುವುದೇನೆಂದರೆ, ಇನ್ನು ಮುಂದೆ ಕರವೇ ಸಂಘಟನೆಗೂ ಜಯದೇವ ಪ್ರಸನ್ನ ಅವರಿಗೂ ಮತ್ತು ಅವರ ಹಿಂಬಾಲಕರಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ. ಇವರ ಯಾವುದೇ ನಡೆ ಮತ್ತು ನುಡಿಗೂ ಕರವೇ ಸಂಘಟನೆ ಜವಾಬ್ದಾರ ಆಗಿರುವುದಿಲ್ಲ.
ಪ್ರಸನ್ನ ಕಷ್ಟಕಾಲದಲ್ಲಿದ್ದಾಗ ಐದಾರು ಲಕ್ಷ ಹಣ ಕೊಟ್ಟು ಅವನಿಗೆ ಮನೆ ಕಟ್ಟಿಸಿಕೊಟ್ಟಿದ್ದೆ. ಅವನ ಕನ್ನಡ ಪ್ರೀತಿಗೆ ಮಾರು ಹೋಗಿ ಅವನಿಗೆ ಸಾಧ್ಯವಾದ ಎಲ್ಲ ನೆರವನ್ನೂ ಕೊಡುತ್ತಿದ್ದೆ. ಸಂಘಟನೆಯನ್ನು ಬೆಳೆಸುವುದಕ್ಕೆ ತೀರ ಅಗತ್ಯವಾದ ಖರ್ಚುವೆಚ್ಚಗಳಿಗಾಗಿ ತಿಂಗಳಿಗೆ 25 ಸಾವಿರ ರು. ಕೊಡುತ್ತಿದ್ದೆ.
ಆದರೆ, ನಂಬಿಕೆ, ದ್ರೋಹ ಮಾಡಿದ ಪ್ರಸನ್ನ ಕನ್ನಡವನ್ನೂ ಮರೆತ, ಕರವೇಯನ್ನೂ ಕಡೆಗಣಿಸಿದ. ಕೇವಲ ಹಣವೇ ಆತನಿಗೆ ಮುಖ್ಯವಾಗುವ ಚಟ ಆರಂಭವಾಗಿ ತನ್ನ ಗುಂಡಿಯನ್ನು ಈಗ ತಾನೇ ತೋಡಿಕೊಂಡಿದ್ದಾನೆ. ಇದು ಕರವೇಗೆ ಮಾತ್ರವಲ್ಲ ಕನ್ನಡ ನಾಡಿಗೆ ಆತ ಮಾಡಿದ ದ್ರೋಹವಾಗಿದ್ದು, ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ಯಾರನ್ನೂ ಕರವೇ ಕ್ಷಮಿಸುವುದಿಲ್ಲ ಎಂದು ಹೇಳಿ ನಾರಾಯಣ ಗೌಡರು ಫೋನ್ ಆಫ್ ಮಾಡಿದರು.