ಬೇಡಿಕೆ ಈಡೇರಿಸದಿದ್ದರೆ ಮುಸ್ಲಿಂರಿಂದ ಉಗ್ರ ಹೋರಾಟ
ಪಟ್ಟಣದಲ್ಲಿ ಅಂಜುಮಾನ್ ಶಾದಿಮಹಲ್ದಿಂದ ಕರ್ನಾಟಕ ಮುಸ್ಲಿಂ ಹೋರಾಟ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಜಾಕ್ ಕಿಲ್ಲೇದಾರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. ಮುಸ್ಲಿಂರಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಬಸ್ ನಿಲ್ದಾಣ ರೋಡ, ಶುಕ್ರವಾರ ಪ್ಯಾಟಿ, ಮಾರ್ಕೇಟ್ ರಸ್ತೆ ಮೂಲಕ ಕಂದಾಯ ಇಲಾಖೆ ಆವರಣವನ್ನು ಪ್ರವೇಶಿಸಿ, ಉಪ ವಿಭಾಗಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ, ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದರು.
ಈ ಸಂದರ್ಭದಲ್ಲಿ ಮನವಿ ಪತ್ರವನ್ನು ಓದಿದ ಸಮಾಜದ ಮುಖಂಡ ಎಲ್.ಎಸ್.ಬಸೀರ ಅಹ್ಮದ, ಮುಸ್ಲಿಂ ಸಮಾಜಕ್ಕೆ ಅವಶ್ಯವಿರುವ ಬೇಡಿಕೆಗಳಿಗೆ 15 ದಿನಗಳ ಒಳಗಾಗಿ ಸ್ಪಂದಿಸದಿದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಸರಕಾರ ಕನಕದಾಸರ, ಮಹರ್ಷಿ ವಾಲ್ಮೀಕಿ ಜಯಂತಿ ಮಾದರಿಯಲ್ಲಿ ಟೀಪು ಸುಲ್ತಾನರ ಜನ್ಮ ದಿನದಂದು ಸರಕಾರಿ ರಜೆ ಘೋಷಿಸಬೇಕು. ಅವರ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಮುಸ್ಲಿಂ ಜನಾಂಗಕ್ಕೆ ಇರುವ ಕಾನೂನು ಬದ್ಧ ಹಕ್ಕು ಅನ್ನುವದನ್ನು ಮರೆಯದೆ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಕ್ಕನ್ನು ಎಲ್ಲ ರಾಜಕೀಯ ಪಕ್ಷಗಳು ಸರಕಾರಗಳ ಮೇಲೆ ಒತ್ತಡ ತಂದ ಸಾಚಾರ ವರದಿ ಹಾಗೂ ಪ್ರತ್ಯೇಕ ಮುಸ್ಲಿಂ ಮೀಸಲಾತಿ ಜಾರಿಗೆ ತರಲು ಒತ್ತಾಯಿಸಬೇಕು. ಸರಕಾರಿ ಮತ್ತು ಅರೇ ಸರಕಾರಿ ನೌಕರಿಯಲ್ಲಿ ಇರುವ ಮುಸ್ಲಿಂ ಜನಾಂಗದ ನೌಕರದಾರರಿಗೆ ಮೀಸಲಾತಿ ಒದಗಿಸಿ ಅವರಿಗೆ ಬಡ್ತಿ ಕಲ್ಪಿಸಬೇಕು ಎಂದರು.
ಸರಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ, ಅನುದಾನಿತ ಶಿಕ್ಷಣ-ಸಂಸ್ಥೆಗಳಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಮೀಸಲಾತಿ ಜೊತೆಗೆ ಉದ್ಯೋಗ ನೀಡಿ, ನಿರುದ್ಯೋಗ ಸಮಸ್ಯೆಯನ್ನು ತೊಲಗಿಸಬೇಕು. ಮತ್ತು ಈ ಸರಕಾರದ ವಿವಿಧ ಯೋಜನೆಗಳಲ್ಲಿ ಕಾಮಗಾರಿಗಳಿಗೆ ಟೆಂಡರ್ ಮಾಡುವಾಗ ಗುತ್ತಿಗೆ ಆದಾರದಲ್ಲಿ ಕೆಲಸ ಮಾಡಲು ಪ್ರತ್ಯೇಕ ಮೀಸಲಾತಿ ನೀಡಬೇಕು. ಮಹಿಳಾ ನೌಕರದಾರರಿಗೆ ನೌಕರಿಯಲ್ಲಿ ಬಹಳ ತೊಂದರೆಯಾಗುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.