ಸಂಗಮೇಶ್ ರಾಜೀನಾಮೆ: ಕಾಂಗ್ರೆಸ್ಸಿಗೆ ದುರ್ಭಿಕ್ಷದಲ್ಲಿ ಅಧಿಕ ಮಾಸ
ರಾಜಕೀಯ ಒಳಜಗಳದಿಂದ ಬೇಸತ್ತಿರುವ ಸಂಗಮೇಶ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ ಸಂಗಮೇಶ್ ಮಹಾಪ್ರಭುಗಳು ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಪಕ್ಷವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ.
ಏಕೆಂದರೆ ಮೇಲ್ಮನೆ ಚುನಾವಣೆಯಲ್ಲಿ ಶತಾಯಗತಾಯ ಮುಖ್ಯಮಂತ್ರಿ ಸದಾನಂದ ಗೌಡರನ್ನು ಮಣ್ಣುಮುಕ್ಕಿಸುವ ಸಾಹಸಕ್ಕೆ ಕೈ ಹಾಕಿರುವ ಕೈ ಪಕ್ಷದ ಗೆಲುವಿಗೆ ತನ್ನದೇ ಪಕ್ಷದ ಶಾಸಕರಾದಿಯಾಗಿ ಪ್ರತಿಯೊಬ್ಬರೂ ಕೈಜೋಡಿಸಲೇ ಬೇಕು. ಯಾರೊಬ್ಬರು ಕೈಯೆತ್ತಿದರೂ ವಿಜಯದ ನಗೆ ಸದಾನಂದಗೆ ಖಚಿತ.
ಬಿಜೆಪಿ ಶಾಸಕರ ಮತವನ್ನೂ ತನ್ನತ್ತ ಸೆಳೆದುಕೊಳ್ಳುವ 'ಅಡ್ಡ ಮಾರ್ಗಕ್ಕೆ' ಕೈ ಪಕ್ಷ ಮುಂದಾಗಿರುವಾದ ಇದ್ದಿದ್ದೊಂದು ಇಲಿ ಕಚ್ಚಿಕೊಂಡು ಹೋಯಿತು ಎನ್ನುವಂತೆ ನಿರ್ಣಾಯಕ ಘಟ್ಟದಲ್ಲಿ ಸಂಗಮೇಶಣ್ಣ ಕೈಯೆತ್ತಿರುವುದು ಯಾವುದರ ಮುನ್ಸೂಚನೆಯೋ? ಅಥವಾ ಸಂಗಮೇಶ್ ಪಕ್ಷಕ್ಕೆ ಟಾಂಗ್ ಕೊಡಲು ಬ್ಲ್ಯಾಕ್ ಮೇಲ್ ತಂತ್ರಕ್ಕೆ ಜೋತುಬಿದ್ದಿದ್ದಾರಾ? ಕಾಲಾಯತಸ್ಮೈನಮಃ !