ಅಣ್ಣಾ ಉಪವಾಸ, ಬಾಬಾ ಸಾವು ಮಹತ್ವದ ಘಟನೆ: TIME
ಏನಪಾ ಅಂದರೆ, ಪ್ರಬಲ ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಚಳವಳಿ 'ಟೈಮ್" ಮ್ಯಾಗಝಿನ್ನ ಈ ವರ್ಷದ ವಿಶ್ವದ 10 ಮಹತ್ವದ ಘಟನೆಗಳಲ್ಲಿ ಸ್ಥಾನ ಪಡೆದಿದೆ. ಜತೆಗೆ ಸತ್ಯ ಸಾಯಿಬಾಬಾ ಅವರ ಸಾವಿನ ಸುದ್ದಿ ಕೂಡಾ ಧಾರ್ಮಿಕ ಕ್ಷೇತ್ರದ ಪ್ರಮುಖ 10 ವರದಿಗಳಲ್ಲಿ ಸೇರಿದೆ.
'ವಿಶ್ವದ 10 ಶ್ರೇಷ್ಠ ಘಟನೆಗ" ಪೈಕಿ ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹವೂ ಒಂದು. ವಿಶ್ವಾದ್ಯಂತ ನಡೆದ ಪ್ರತಿಭಟನೆಗಳ ಪೈಕಿ ಅಣ್ಣಾ ಹಜಾರೆಯ ಉಪವಾಸ ಸತ್ಯಾಗ್ರಹ ಹೆಚ್ಚಿನ ಪರಿಣಾಮ ಬೀರಿದೆ.
ಭಾರತ ಸರಕಾರದ ಮೇಲೆ ಈ ಸತ್ಯಾಗ್ರಹ ಭಾರಿ ಒತ್ತಡ ನಿರ್ಮಿಸಿತ್ತು ಹಾಗೂ ಸರಕಾರ ಭಾರಿ ಟೀಕೆಗೆ ಗುರಿಯಾಯಿತು. ಅದೂ ಅಲ್ಲದೆ, ಸರಕಾರದ ಮಂತ್ರಿಗಳು ಹಾಗೂ ಅಧಿಕಾರಿಗಳು ಭ್ರಷ್ಟಾಚಾರ ಆರೋಪಗಳಲ್ಲಿ ಸೆರೆಮನೆ ವಾಸ ಅನುಭವಿಸಿದರು.
ಹಜಾರೆಯ ಉಪವಾಸಗಳು ಅಥವಾ ಉಪವಾಸ ಮಾಡುತ್ತೇನೆ ಎನ್ನುವ ಬೆದರಿಕೆ ಕೂಡ ಭಾರತದ ಮಹಾನಗರಗಳಲ್ಲಿ ಭಾರಿ ಪರಿಣಾಮವನ್ನು ಉಂಟು ಮಾಡುತ್ತದೆ. ಹಜಾರೆ ಉಪವಾಸವೆಂದರೆ ಸಾಕು ತೀವರ ಸಂಚಲನ, ಜನಸಂದಣಿ ಉಂಟಾಗುತ್ತದೆ. ಬಲಿಷ್ಠ ಲೋಕಪಾಲ ಮಸೂದೆಗಾಗಿ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿಗೆ ಭಾರಿ ಜನ ಬೆಂಬಲವಿದೆ ಎಂದು ಅದು ಹೇಳಿದೆ. 74 ವರ್ಷ ಪ್ರಾಯದ ಹಜಾರೆ ಭಾರತದ ಮಧ್ಯಮ ವರ್ಗದ ಜನರ ಆದರ್ಶವಾಗಿದ್ದಾರೆ ಎಂದು ಅದು ಹೇಳಿದೆ
ಸತ್ಯ ಸಾಯಿಬಾಬಾ ಅವರ ಮರಣದ ಸುದ್ದಿ ಕೂಡಾ ಧಾರ್ಮಿಕ ಕ್ಷೇತ್ರದ ಪ್ರಮುಖ ಹತ್ತು ವರದಿಗಳಲ್ಲಿ ಸೇರಿದೆ. ಭಾರತದ ಅತ್ಯಂತ ಪ್ರಸಿದ್ಧ ಗುರುಗಳಲ್ಲಿ ಒಬ್ಬರಾದ ಸಾಯಿಬಾಬಾ ಅಂತ್ಯಕ್ರಿಯೆಗೆ ಸಾವಿರಾರು ಜನ ಸೇರಿದ್ದರು ಎಂದು TIME ವರದಿ ಉಲ್ಲೇಖಿಸಿದೆ. ವಿಲಿಯಂ ಮತ್ತು ಕೇಟ್ ವೈಭವೋಪೇತ ಮದುವೆ, ಐಎಂಎಫ್ ಮಾಜಿ ಮುಖ್ಯಸ್ಥ ಡೊಮಿನಿಕ್ ಸ್ಟ್ರಾಸ್ ಕಾನ್ ಅವರ ಲೈಂಗಿಕ ಹಗರಣ ಮುಂತಾದ ಸುದ್ದಿಗಳೂ ಗಮನ ಸೆಳೆದಿವೆ.
ಉಳಿದಂತೆ ಅರಬ್ ದಂಗೆ ಮತ್ತು ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹತ್ಯೆ ಸುದ್ದಿಗಳು ಸಹ ಅತಿ ಹೆಚ್ಚು ಓದುಗರ ಗಮನ ಸೆಳೆದಿವೆ ಎಂದು 'ಟೈಮ್' ಪತ್ರಿಕೆ ಹೇಳಿದೆ. 2011ರಲ್ಲಿ ಘಟಿಸಿದ ರಾಜಕೀಯ, ಸಿನಿಮಾ, ಮನರಂಜನೆ, ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ರಂಗಗಳ 54 ಪ್ರಮುಖ ಘಟನೆಗಳಲ್ಲಿ ಪತ್ರಿಕೆ 10 ವರದಿಗಳನ್ನು ಆಯ್ಕೆ ಮಾಡಿದೆ.