ಲೋಕಾಯುಕ್ತ ಪೀಠ: ನ್ಯಾ ಬನ್ನೂರುಮಠ ಏನನ್ನುತ್ತಾರೆ?
ಬೇಸರದ ಸಂಗತಿಯೆಂದರೆ, ತಾಜಾ ಆಗಿ ಸನ್ಮಾನ್ಯ ಯಡಿಯೂರಪ್ಪ ಅವರೂ ಹೇಳಿದಂತೆ 'ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಮನೆ ಕಟ್ಟಿಸಿಕೊಂಡು' ಕಳಂಕಿತ ನ್ಯಾಯಮೂರ್ತಿ ಇಷ್ಟೇ ಮಗುಮ್ಮಾಗಿ ಕುಳಿತಿದ್ದಾರೆ.
ಅಲ್ಲ ಸ್ವಾಮಿ 'ಕಳಂಕಿತ ನ್ಯಾಯಮೂರ್ತಿ'ಗಳೇ ನೌಕರರಿಗಾಗಿ ಕೊಡಲ್ಪಡುವ ನಿವೇಶನವನ್ನು ನೀವು ಹೊಡೆದುಕೊಂಡಿದ್ದೀರಿ. ಅಷ್ಟೂ ಸಾಲದು ಎಂದು ಪಾರ್ಕಿಗಾಗಿ ತೆಗೆದಿರಿಸಿದ್ದ ಜಾಗದಲ್ಲಿ ಬಂಗಲೆ ಎಬ್ಬಿಸಿದಿರಿ. ನಿಮಗೇನೂ ಅನಿಸುತ್ತಿಲ್ಲವಾ!? ಕಳ್ಳ ನೂರು ರುಪಾಯಿ ಹೊಡೆದರೂ ಒಂದೇ, ಒಂದು ರುಪಾಯಿ ಹೊಡೆದರೂ ಒಂದೇ ಅನ್ನುತ್ತದೆ ನಿಮ್ಮದೇ ನ್ಯಾಯಸ್ಥಾನ.
ಆಯ್ತು. ಈ ಹಿಂದೆ ಲೋಕಾಯುಕ್ತ ಪೀಠ ಅಲಂಕರಿಸಿದ ಕೆಲವೇ ದಿನಗಳಲ್ಲಿ ಇಂತಹ ಆರೋಪ ಬಂದಾಗ ಸ್ವಯಂಪ್ರೇರಿತರಾಗಿ ರಾಜೀನಾಮೆ ಬಿಸಾಕಿ, ಸ್ವಂತ ಕಾರಿನಲ್ಲಿ ಮನೆಗೆ ತೆರಳಿದರು. ಅವರೀಗ ನಿಮ್ಮಂತೆ (ಜಗ)ಮೊಂಡು ವಾದಕ್ಕಿಳಿದು ಲೋಕಾಯುಕ್ತಕ್ಕೆ ನನ್ನನ್ನೇ ವಾಪಸ್ ಕರೆಸಿಕೊಳ್ಳಿ ಅಂದ್ರೆ ನಿಮ್ಮ ಬೆಂಬಲಕ್ಕೆ ನಿಂತಿರುವ ಸರಕಾರದ ಉತ್ತರವೇನು?
ಇಷ್ಟೆಲ್ಲ ರಂಪರಾಮಾಯಣ ಆದಮೇಲಾದರೂ, ನೀವೇ ಮುಂದೆ ಬಂದು ನನಗೆ ಈ ಲೋಕಾಯುಕ್ತ ಹುದ್ದೆ ಆಗಿಬರೋಲ್ಲ ಅನ್ನಬಹುದಲ್ವಾ? ತನ್ಮೂಲಕ ಅನಗತ್ಯವಾಗಿ ಸರಕಾರ ಮತ್ತು ರಾಜ್ಯಪಾಲರ ನಡುವಣ ತಿಕ್ಕಾಟಕ್ಕೆ ಕೊನೆ ಹಾಡಬಹುದಲ್ವಾ? ತನ್ಮೂಲಕ ರಾಜ್ಯಕ್ಕೆ ಅಕಳಂಕಿತ ನ್ಯಾಯಮೂರ್ತಿಯೊಬ್ಬರು ಲೋಕಾಯುಕ್ತ ಪೀಠಾರೂಢ ಮಾಡುವುದಕ್ಕೆ ನೀವು 'ದೊಡ್ಡ ಮನಸು' ಮಾಡಬಹುದಲ್ವಾ? ಏನಂತೀರಿ, ನ್ಯಾಯಮೂರ್ತಿ ಬನ್ನೂರುಮಠರೇ?