ಭದ್ರಾ ಮೇಲ್ದಂಡೆ ಯೋಜನೆ: ಯಡಿಯೂರಪ್ಪಗೆ ಕ್ಲೀನ್ ಚಿಟ್
ತನಿಖಾ ವರದಿಯ ಪ್ರಕಾರ, ಗಮನಾರ್ಹ ಸಂಗತಿಯೆಂದರೆ ಯಡಿಯೂರಪ್ಪ ಅವರು ಟೆಂಡರ್ ಪ್ರಕ್ರಿಯೆ ಚಿತ್ರಣದಲ್ಲಿ ಕಾಣಿಸಿಕೊಂಡಿರುವುದು ಕೊನೆಯ ಘಟ್ಟದಲ್ಲಿ! ಲೋಕಾಯುಕ್ತ ಕೋರ್ಟಿನಲ್ಲಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಯಡಿಯೂರಪ್ಪ ಮೊದಲ ಬಾರಿಗೆ ಸಮಾಧಾನ ತರುವಂತಹ ತನಿಖಾ ವರದಿ ಇದಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಧಿಕ ಮೊತ್ತದ ಬಿಡ್ ಸಲ್ಲಿಸಿದ್ದ ಕಂಪನಿಗೆ (RNS Infrastructure) ಟೆಂಡರ್ ಅನುಮೋದಿಸುವ ಮುನ್ನ ಆ ಕಂಪನಿಯಿಂದ ಯಡಿಯೂರಪ್ಪ ಕುಟುಂಬದವರ ಕಂಪನಿಗೆ (Dhavalgiri Properties and Sahyadri Healthcare) ಲಂಚ ಸಮದಾಯವಾಗಿದೆ ಎಂಬುದು ಪ್ರಕರಣದ ಪ್ರಮುಖ ದೂರಾಗಿದೆ.
ಆದರೆ ತಜ್ಞತರ ಸಮಿತಿ ನೀಡಿದ ಸಲಹೆಯಂತೆ ಯಡಿಯೂರಪ್ಪ ಟೆಂಡರ್ ಗೆ ಅಂಕಿತ ಹಾಕಿದ್ದಾರೆ ಎಂಬುದು ತನಿಖೆಯಿಂದ ಸಾಬೀತಾಗಿದೆ ಎಂದು ಲೋಕಾಯುಕ್ತ ಮೂಲಗಳು ದೃಢಪಡಿಸಿವೆ.
ಲೋಕಾಯುಕ್ತ ಪೊಲೀಸರು ಪ್ರಕರಣದ ಸಂಬಂಧ ಡಿಸೆಂಬರ್ 19ರ ವೇಳೆಗೆ ಕೋರ್ಟಿಗೆ ವರದಿ ಸಲ್ಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸಿದ್ದು, ಇಡೀ ಟೆಂಡರ್ ಪ್ರಕ್ರಿಯೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ.