ಪದ್ಮನಾಭಸ್ವಾಮಿಗೆ 'ಅನಂತ' ಭದ್ರತಾ ವ್ಯವಸ್ಥೆ
ಕ್ಷೇತ್ರದ ನೆಲಮಾಳಿಗೆಯ ಆರು ರಹಸ್ಯ ಕೊಠಡಿಗಳ ಪೈಕಿ ಐದರಲ್ಲಿ ಜಗತ್ತು ನಿಬ್ಬೆರಗಾಗುವಷ್ಟು ಸಂಪತ್ತು ಪತ್ತೆಯಾದ ಬಳಿಕ ಸಂಪತ್ತಿನ ಕಾವಲಿನ ಸಮಸ್ಯೆ ತಲೆದೋರಿದೆ. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಮಾಡಿರುವ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಉದ್ಘಾಟಿಸಿದ್ದಾರೆ.
ಕ್ಷೇತ್ರಕ್ಕೆ ಲೋಪ ರಹಿತ ಭದ್ರತೆಯನ್ನು ಒದಗಿಸುವ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿರುವ ಭರವಸೆಯನ್ನು ರಾಜ್ಯ ಹಂತ ಹಂತವಾಗಿ ಕಾರ್ಯಗತಗೊಳಿಸುತ್ತಿದೆ ಎಂದು ಚಾಂಡಿ ಈ ಸಂದರ್ಭದಲ್ಲಿ ಹೇಳಿದರು. ದೇವಸ್ಥಾನದ ಸುತ್ತ 24 ಗಂಟೆಯೂ ಕಣ್ಗಾವಲು ಇಡುವ ಸಲುವಾಗಿ ಬಹು ಹಂತದ ಸಿಸಿಟಿವಿ ಅಳವಡಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಎಲ್ಲ ಆಯಕಟ್ಟಿನ ಜಾಗದಲ್ಲಿ 58 ಸಿಸಿಟಿವಿಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.
ವೈಜ್ಞಾನಿಕ ಭದ್ರತಾ ವ್ಯವಸ್ಥೆಯನ್ನು ಅಳವಡಿಸಿರುವ ಸರಕಾರಿ ಸ್ವಾಮ್ಯದ ಕೆಲ್ಟ್ರಾನ್ ಸಂಸ್ಥೆ ಪೊಲೀಸರಿಗೆ ಅದನ್ನು ನಿಭಾಯಿಸುವ ತರಬೇತಿ ನೀಡುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಕ್ಷೇತ್ರದ ಆಡಳಿತವನ್ನು ನೋಡಿಕೊಳ್ಳುತ್ತಿರುವ ತಿರುವಾಂಕೂರು ರಾಜಮನೆತನದ ಉತ್ರಾಡಂ ತಿರುನಾಳ್ ಮಾರ್ತಾಂಡ ವರ್ಮ, ಡಿಜಿಪಿ ಜೇಕಬ್ ಪುನ್ನೋಸ್ ಮತ್ತಿತರರು ಉಪಸ್ಥಿತರಿದ್ದರು.