ಭಟ್ಕಳ್ ತಲೆಗೆ 15 ಲಕ್ಷ; ಉತ್ತರ ಕನ್ನಡಕ್ಕೆ NIA ತಂಡ
ಇದರಿಂದಾಗಿ ಮುಜಾಹಿದಿನ್ ಉಗ್ರರು ನೀಡಿದ ಮಾಹಿತಿ ಮೇರೆಗೆ ಭಟ್ಕಳ್ ತಲೆಗೆ ಘೋಷಿಸಲಾಗಿದ್ದ ಬಹುಮಾನದ ಮೊತ್ತವನ್ನು ಏರಿಸಲಾಗಿದೆ. ಈ ಮೊದಲು ಆತನ ತಲೆಗೆ 3 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ದೇಶದ ವಿವಿಧ ಕಡೆ ನಡೆದ ಸ್ಫೋಟ ಪ್ರಕರಣಗಳ ರೂವಾರಿ, ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಯಾಸೀನ್ ಭಟ್ಕಳ್ ಕುರಿತು ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ.
ಈ ಮಧ್ಯೆ, ದೆಹಲಿ ಪೊಲೀಸರ ಜತೆ ಸಂಪರ್ಕ ಸಾಧಿಸಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಖಲು ಎಸಿಪಿ ನ್ಯಾಮಗೌಡ ನೇತೃತ್ವದ ತಂಡ ದೆಹಲಿಗೆ ಹೋಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ. ಇನ್ನು, ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು (NIA) ಗುರುವಾರ ಭಟ್ಕಳ್ ಗೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಯಾಸಿನ್ (27) ದೆಹಲಿಯ ಮೂರು ಸ್ಫೋಟ ಪ್ರಕರಣಗಳು ಸೇರಿದಂತೆ ದೇಶವ ವಿವಿಧೆಡೆ ನಡೆದ ಸ್ಫೋಟ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈತ ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಪರಾರಿಯಾಗಿರಬಹುದೆಂಬ ಶಂಕೆ ಇದೆ. ಭಟ್ಕಳ್ ಪುಣೆಯ ಜರ್ಮನ್ ಬೇಕರಿ ಸ್ಫೋಟ ನಡೆಸಬೇಕಾದ ಸ್ಥಳವನ್ನು ಪರಿಶೀಲನೆ ನಡೆಸಿದ್ದ ಎನ್ನಲಾಗಿದೆ.