ಸೈಲೆಂಟ್ ಆಗಿ ಶೆಟರ್ ಕೆಳಗೆಳೆದ ವಾಲ್ಮಾರ್ಟ್
ನವದೆಹಲಿ, ಜೈಪುರದಲ್ಲಿರುವ ವಾಲ್ಮರ್ಟ್ ಮಳಿಗೆ ಗಳು ರೀಟೈಲ್ ಕ್ಷೇತ್ರದ ವರ್ತಕರ ಪ್ರತಿಭಟನೆಯ ಬಿಸಿಗೆ ಹೆದರಿ ತಮ್ಮ ಅಂಗಡಿ ಮಳಿಗೆಯ ಬಾಗಿಲು ಮುಚ್ಚಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿ ರೂಪಿಸಿರುವ ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ ಸುಮಾರು 5 ಕೋಟಿ ವ್ಯಾಪಾರಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. 10 ಸಾವಿರಕ್ಕೂ ಹೆಚ್ಚು ವರ್ತಕರ ಒಕ್ಕೂಟ ಈ ಭಾರತ್ ಬಂದ್ ನಲ್ಲಿ ಪಾಲ್ಗೊಂಡಿದೆ.
ದೆಹಲಿಯ ಭಾರ್ತಿ ವಾಲ್ಮರ್ಟ್ ಸ್ಟೋರ್ ಹಾಗೂ ಕೇರ್ ಫಾರ್ ಮಳಿಗೆಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ.
ಜಂತರ್ ಮಂತರ್ ಬಳಿ ಬೃಹತ್ ಸಂಖ್ಯೆಯಲ್ಲಿ ಸೇರಿರುವ ವ್ಯಾಪಾರಿಗಳು, ವಾಲ್ಮಾರ್ಟ್, ಕೇರ್ ಫಾರ್ ಹಾಗೂ ಟೆಸ್ಕೋ ಮುಂತಾದ ಸಂಸ್ಥೆಗಳು ದೇಶಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡು, ಕೇರಳದಲ್ಲೂ ಚಿಲ್ಲರೆ ಮಾರುಕಟ್ಟೆಗಳು ಬಂದ್ ಆಗಿದೆ. ಯುಪಿಎ ಸರ್ಕಾರದ ನಿರ್ಧಾರವನ್ನು ಬಿಜೆಪಿ, ಎಐಎಡಿಎಂಕೆ, ಎಡಪಕ್ಷ, ಎಸ್ ಪಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ವಿರೋಧಿಸಿದೆ. ಗುರುವಾರ ಸಂಜೆಯೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಕೇಂದ್ರ ಸಚಿವ ಆನಂದ್ ಶರ್ಮ ಹೇಳಿದ್ದಾರೆ.