ಜಾತಿಯಲ್ಲಿ ರೆಡ್ಡಿಯಾದ್ರೆ ಎಸ್ಕೇಪ್, ಇಲ್ಲವಾದ್ರೆ ಜೈಲು!
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಸಿಬಿಐ ವಶಕ್ಕೆ ನೀಡಲಾಗಿದೆ. ಶ್ರೀಲಕ್ಷ್ಮಿಯನ್ನು ಸೇವೆಯಿಂದ ಅಮಾನತು ಮಾಡುವ ಸುದ್ದಿಯೂ ಬಂದಿದೆ. ಈ ಮಧ್ಯೆ ಜಾತಿ ರಾಜಕಾರಣಕ್ಕೆ ಶ್ರೀಲಕ್ಷ್ಮಿ ಬಲಿಯಾಗಿದ್ದಾರೆ ಎಂಬ ಕೂಗು ಎದ್ದಿದೆ.
ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆ, ಟಿಕೆಟ್ ಹಂಚಿಕೆ ಇದ್ದಂತೆ ಕ್ಯಾಬಿನೆಟ್ ರಚನೆ, ಅಧಿಕಾರ ವರ್ಗ ಎಲ್ಲವೂ ಜಾತಿ ಆಧಾರಿತವೇ ಹಿಂದಿನಿಂದ ನಡೆದುಕೊಂಡು ಬಂದಿರುವುದು ಸತ್ಯ ಸಂಗತಿ.
ಕಾಪು ಸಮುದಾಯಕ್ಕೆ ಸೇರಿದ ಶ್ರೀಲಕ್ಷ್ಮಿಯನ್ನು ತುಳಿಯಲು ರೆಡ್ಡಿ ಜನಾಂಗದವರು ಹೂಡಿರುವ ತಂತ್ರ ಎಂದು ಆಂಧ್ರ ಮಾಧ್ಯಮಗಳಲ್ಲಿ ಭರ್ಜರಿ ಸುದ್ದಿಯಾಗುತ್ತಿದೆ.22 ವರ್ಷಕ್ಕೆ ಐಎಎಸ್ ಪಟ್ಟಕ್ಕೇರಿದ್ದ ಶ್ರೀಲಕ್ಷ್ಮಿಯನ್ನು ದಾಳವಾಗಿ ಬಳಸಿಕೊಂಡ ವೈಎಸ್ ರಾಜಶೇಖರ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಅವರು ಮುಂದೊಂದು ದಿನ ಆಕೆಯನ್ನು ತುಳಿಯಲು ಆಗಲೇ ನಿರ್ಧರಿಸಿದ್ದರು.
ಸಿಎಂಗೂ ಕೂಡಾ ಅಂಟಿದ ಜಾಡ್ಯ: ತನಗೆ ರಕ್ಷಣೆ ಬೇಕು ಎಂದು ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಕಚೇರಿ ತಟ್ಟಿದ ಶ್ರೀಲಕ್ಷ್ಮಿಗೆ ಜಾತಿ ನೆಪದಿಂದ ಸಿಎಂ ರಕ್ಷಣೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ.
ವಿವಾದಿತ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಬಂಧನದ ಬಗ್ಗೆ ಪಿಆರ್ ಪಿ ಚಿರಂಜೀವಿಯಾಗಲಿ, ಕಾಂಗ್ರೆಸ್ ನ ಬಿ ಸತ್ಯನಾರಾಯಣ ಅವರಾಗಲಿ ಮಾತನಾಡದಿರುವುದು ಕೂಡಾ ಜಾತಿ ಪ್ರಶ್ನೆಯಿಂದಾಗಿ ಎಂದು ಸುದ್ದಿ ಪ್ರಸಾರವಾಗಿದೆ.
ಸಬಿತಾ ರೆಡ್ಡಿ ತನ್ನನ್ನು ತಾನ ಉಳಿಸಿಕೊಳ್ಳಲು ಅನ್ಯ ಜಾತಿಗೆ ಸೇರಿರುವ ಶ್ರೀಲಕ್ಷ್ಮಿಯನ್ನು ಬಲಿಕೊಟ್ಟಿದ್ದಾರೆ ಎನ್ನಬಹುದಾದರೂ ಶ್ರೀಲಕ್ಷ್ಮಿಯ ಜಾತಿಯ ಉಪ ಜಾತಿಗೆ ಸೇರಿರುವ ವಿವಿ ಲಕ್ಷ್ಮಿನಾರಾಯಣ ಅವರು ಮಾತ್ರ ಖಡಕ್ ಆಗಿ ವಿಚಾರಣೆ ನಡೆಸುತ್ತಿರುವುದನ್ನು ಯಾರೂ ಪ್ರಶ್ನಿಸುವಂತಿಲ್ಲ.
ಒಟ್ಟಿನಲ್ಲಿ ಕರ್ನಾಟಕದಲ್ಲಿ ಬಳ್ಳಾರಿ ರೆಡ್ಡಿ ಸೋದರರು, ಶಿವಮೊಗ್ಗ ಯಡಿಯೂರಪ್ಪ ಕುಟುಂಬದವರ ಜಾತಿ ರಾಜಕಾರಣಕ್ಕಿಂತ ಹೆಚ್ಚು ಪಟ್ಟು ಅನಾಹುತ ಪಕ್ಕದ ಆಂಧ್ರಪ್ರದೇಶದಲ್ಲಿ ಸಂಭವಿಸುತ್ತಿದೆ.