ಯಡ್ಡಿ 3ನೇ ದೂರು: 'ಹೌಸ್ ದಟ್ ಮೈ ಲಾರ್ಡ್?' ಎಂದ ಸಿರಾಜಿನ್ ಬಾಷಾ
ಮೇಲ್ಮನವಿಯಲ್ಲಿ ಯಡಿಯೂರಪ್ಪ ಪ್ರಭಾವಿ ವ್ಯಕ್ತಿ ಆಗಿದ್ದು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ಜಾಮೀನು ರದ್ದು ಮಾಡಬೇಕು. ಮಾಜಿ ಮುಖ್ಯಮಂತ್ರಿ ಮೇಲಿನ ಆರೋಪಗಳನ್ನು ಕುರಿತು ಲೋಕಾಯುಕ್ತ ತನಿಖೆ ಪ್ರಗತಿಯಲ್ಲಿದೆ. ಅಲ್ಲದೆ, ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳು ಹೊಸ ಹೊಸ ಆರೋಪಗಳನ್ನು ಬೆಳಕಿಗೆ ತರುತ್ತಿವೆ. ಈ ಕಾರಣಕ್ಕೆ ಜಾಮೀನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಅದಕ್ಕಿಂತ ಮುಖ್ಯವಾಗಿ, ರಾಜ್ಯ ಹೈಕೋರ್ಟಿನ ಎರಡು ವಿಭಾಗೀಯ ಪೀಠಗಳು ಇದೇ ಪ್ರಕರಣದಲ್ಲಿ ನೀಡಿರುವ ಎರಡು ವಿಭಿನ್ನ ತೀರ್ಪುಗಳ ಬಗ್ಗೆ ಸುಪ್ರೀಂಕೋರ್ಟ್ ಗಮನ ಸೆಳೆದಿದ್ದಾರೆ.
ಪ್ರಕರಣದ ಸಂಬಂಧ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಸಲ್ಲಿಸಿದಾಗ ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಅವರು ಮೇಲ್ನೋಟಕ್ಕೆ (prima facie) ದೂರುದಾರರು ಆತಂಕ ವ್ಯಕ್ತಪಡಿಸಿರುವಂತೆ ಆರೋಪಿಯು ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ನೀಡಲಾಗದು ಎಂದು ಆದೇಶಿಸಿದ್ದರು.
ಆದರೆ ಇದೇ ಪ್ರಕರಣ ನ್ಯಾ. ಬಿ.ವಿ. ಪಿಂಟೋ ಅವರ ಪೀಠದ ಮುಂದೆ ಬಂದಾಗ ಅವರು ಲೋಕಾಯುಕ್ತ ವಿಶೇಷ ಕೋರ್ಟ್ ನಿರ್ಣಯವನ್ನು ಖಂಡಿಸುತ್ತಾ, ಆರೋಪಿ ಯಡಿಯೂರಪ್ಪ ಅವರೇನೂ ಕೊಲೆಗಡುಕರಲ್ಲ, ಸಾಮಾನ್ಯ ಆರೋಪಿ, ಅವರಿಗೆ ಜಾಮೀನು ನೀಡತಕ್ಕದ್ದು ಎಂದಿದ್ದರು.
ಹೀಗೆ ಹೈಕೋರ್ಟಿನ ಎರಡು ಪೀಠಗಳು ವಿಭಿನ್ನ ಆದೇಶ ಹೊರಡಿಸಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಸಿರಾಜಿನ್ ಬಾಷಾ 'ಹೌಸ್ ದಟ್ ಮೈ ಲಾರ್ಡ್?' ಎಂದು ದೆಹಲಿಯಲ್ಲಿ ಸೋಮವಾರ ಕೂಗಿದ್ದಾರೆ. ಜತೆಗೆ ನ್ಯಾ. ಬಿ.ವಿ. ಪಿಂಟೋ ಪೀಠ ಜಾಮೀನು ಮಂಜೂರು ಮಾಡಿರುವುದು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ಭಂಗ ತಂದಿದೆ ಎಂದೂ ಅವರು ಅಲವತ್ತುಕೊಂಡಿದ್ದಾರೆ.