ಯಡಿಯೂರಪ್ಪ ಸಾಕಿದ ಪ್ರಾಣಿಗಳಂತೆ ಸೋಮಣ್ಣ, ರೇಣುಕಾ
ಈಗ ತಾಜಾ ಆಗಿ ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅವರು ರಾಜ್ಯದ ವಸತಿ ಸಚಿವ ಸೋಮಣ್ಣ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಾಕಿದ ಎರಡು ಪ್ರಾಣಿಗಳು ಎಂದು ಲೇವಡಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 69ನೇ ಹುಟ್ಟುಹಬ್ಬ ಅಂಗವಾಗಿ ಬಂಗಾರಪ್ಪ ಅಭಿಮಾನಿ ಬಳಗ ಸೊರಬ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಸ್. ಬಂಗಾರಪ್ಪ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಎಲ್ಲದಕ್ಕೂ ಬಹು ಪರಾಕ್ ಹಾಕುವ ಬೆಂಗಳೂರಿನ ಸೋಮಣ್ಣ ಮತ್ತು ಹೊನ್ನಾಳಿ ರೇಣುಕಾಚಾರ್ಯ ಯಡಿಯೂರಪ್ಪ ಅವರ ಬಾಲಗಳಿದ್ದಂತೆ. ಇವರ ಜೊತೆಗೆ ಇಲ್ಲಿನ ಶಾಸಕ ಹೆಚ್. ಹಾಲಪ್ಪಅತ್ಯಂತ ಭ್ರಷ್ಟ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ ಎಂದರು.
ಶಿವಮೊಗ್ಗ ಜಿಲ್ಲೆ ಜೆ. ಹೆಚ್. ಪಟೇಲ್ ಮತ್ತು ಎಸ್. ಬಂಗಾರಪ್ಪ ಅವರಂತಹ ಜನಪರ ಕಾಳಜಿಯ ಒಳ್ಳೆಯ ಮುಖ್ಯಮಂತ್ರಿಗಳನ್ನು ನೀಡಿದ ಖ್ಯಾತಿಯ ಜೊತೆಗೆ ಭ್ರಷ್ಟ ಯಡಿಯೂರಪ್ಪ ಅವರನ್ನೂ ನೀಡಿದ ಅಪಖ್ಯಾತಿಯನ್ನೂ ಸಂಪಾದಿಸಿದೆ ಎಂದು ಯತ್ನಾಳ್ ಕುಟುಕಿದರು.