ಬಾಳಾ ಕೆಣಕುನುಡಿಗೆ ಸವಣೂರಿನಲ್ಲಿ ಕರವೇ ಕಿಡಿ
ಶುಕ್ರವಾರ ಸಂಜೆ ಸವಣೂರಿನ ಭರಮಲಿಂಗೇಶ್ವರ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚುವ ಮೂಲಕ ತಮ್ಮ ಕಿಚ್ಚನ್ನು ವ್ಯಕ್ತಪಡಿಸಿದ ಕ.ರ.ವೇ ಕಾರ್ಯಕರ್ತರು, ಬೆಳಗಾವಿ ಮೇಯರ್ ಹಾಗೂ ಬಾಳಾ ಠಾಕ್ರೆ ಅವರ ವಿರುದ್ದ ಘೋಷಣೆಗಳನ್ನು ಕೂಗಿದರು.
ಇರುವ ಸತ್ಯವನ್ನೇ ನುಡಿದಿರುವ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರನ್ನು ಠಾಕ್ರೆ ಅಪಮಾನಿಸಿದ್ದಾರೆ. ತನ್ಮೂಲಕ ಸಮಸ್ತ ಕನ್ನಡಿಗರ ಭಾವನೆಗಳಿಗೆ ನೋವು ಮಾಡಿದ್ದಾರೆ. ಪ್ರತಿಯೊಂದು ಬಾರಿಯೂ ಕನ್ನಡಿಗರ ಬಗ್ಗೆ ತಾತ್ಸಾರ ತೋರುತ್ತಿರುವ ಠಾಕ್ರೆ ಅನಗತ್ಯವಾದ ವಿವಾದವನ್ನು ಸೃಷ್ಠಿಸುತ್ತಿದ್ದಾರೆ ಎಂದು ಕರವೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡದ ಅನ್ನವನ್ನು ಉಂಡು ಕನ್ನಡ ನಾಡಿಗೆ ಅಪಮಾನ ಮಾಡಿರುವ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ತನ್ನ ಸ್ಥಾನದ ಗೌರವವನ್ನು ಕಳೆದುಕೊಂಡಿದ್ದಾರೆ. ಇಂತಹ ವ್ಯಕ್ತಿಗಳನ್ನು ಮೇಯರ್ ಸ್ಥಾನದಿಂದ ಕಿತ್ತೆಸೆಯಬೇಕು. ಪಾಲಿಕೆಯನ್ನು ಸೂಪರ್ ಸೀಡ್ ಮಾಡುವ ಮೂಲಕ, ಬೆಳಗಾವಿಯ ಎಮ್.ಇ.ಎಸ್ ಸಂಘಟನೆಗೆ ತಕ್ಕ ಪಾಠವನ್ನು ಕಲಿಸಬೇಕು ಎಂದು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಕ.ರ.ವೇ ಅಧ್ಯಕ್ಷರಾದ ಮಲ್ಲಾರೆಪ್ಪ ತಳ್ಳಿಹಳ್ಳಿ, ಪದಾಧಿಕಾರಿಗಳಾದ ಉಮೇಶ ಕಳಕಪ್ಪನವರ್, ಪರಶುರಾಮ್ ಈಳಿಗೇರ, ರಾಘವೇಂದ್ರ ರೇವಣಕರ್, ಅಬ್ದುಲರೆಹೆಮಾನ ಬಿಜಾಪುರಿ, ಮಾಂತೇಶ ಕುಲಕರ್ಣಿ, ನರಸಿಂಹ ನಾಮಾವಳಿ, ಸಿ.ಟಿ ಬುಶೆಟ್ಟಿ, ಗದಿಗೆಪ್ಪ ಬಾರ್ಕಿ, ಜಗದೀಶ ಸಾಲಿಮಠ, ಪುಟ್ಟಪ್ಪ ತಿಮ್ಮಣ್ಣನವರ್, ಬಸನಗೌಡ ಪಾಟೀಲ ಸೇರಿದಂತೆ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.