ಹೊಸ ಪಕ್ಷ ಕಟ್ಟುವ ಬಾಂಬ್ ಸಿಡಿಸಿದ ಜೆ ಶಾಂತಾ
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮುಲುಗೆ ಬೆಂಬಲ ನೀಡಬೇಕೆಂದು ನಾವೀಗಲೆ ನಿರ್ಧರಿಸಿದ್ದೇವೆ. ಇನ್ನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಶ್ರೀರಾಮುಲು ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯಲ್ಲಿಯೇ ಕುತಂತ್ರ ನಡೆಯುತ್ತಿದೆ. ಆದರೂ ಗೆಲುವು ಶ್ರೀರಾಮುಲು ಅವರದಾಗಲಿದೆ ಎಂದು ಶಾಂತಾ ನುಡಿದರು.
ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರು ಸೇರಿದಂತೆ ಬಿಜೆಪಿಯ ನಾಯಕರ ಇಡೀ ದಂಡೇ ಬಳ್ಳಾರಿಯಲ್ಲಿ ಬಂದು ಕುಳಿತಿದೆ. ಆದರೆ, ಜನರ ಆಶೀರ್ವಾದ ಶ್ರೀರಾಮುಲು ಮೇಲಿದೆ. ಏನೇ ತಂತ್ರ ಹೂಡಿದರೂ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಶಾಂತಾ ಸೆಡ್ಡು ಹೊಡೆದರು.
ಅಡ್ವಾಣಿಯವರು ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರ ದೊಡ್ಡ ಗುಂಪೇ ಕಾಣೆಯಾಗಿತ್ತು. ಅದು ಪಕ್ಷವಿರೋಧಿ ಚಟುವಟಿಕೆಯಲ್ಲವೆ? ಅವರ ವಿರುದ್ಧ ಬಿಜೆಪಿ ಕ್ರಮ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿರುವ ಶಾಂತಾ, ಮುಂದೆ ಕಾದು ನೋಡಿ, ಅನೇಕ ಶಾಸಕರು ಬಿಜೆಪಿಯಿಂದ ಹೊರಬರಲಿದ್ದು, ಹೊಸ ಪಕ್ಷ ಕಟ್ಟಲಿದ್ದೇವೆ ಎಂದು ಬಿಜೆಪಿ ನಾಯಕರ ಬೆವರಿಳಿಯುವಂತೆ ಮಾಡಿದ್ದಾರೆ.