ಸಿವಿಲ್ ಕೋರ್ಟ್ ಆವರಣದಲ್ಲಿ ಹಬ್ಬುತ್ತಿದೆ ಗಾಳಿಸುದ್ದಿ
ಸಿವಿಲ್ ಕೋರ್ಟ್ ಆವರಣದಲ್ಲಿ ಹಬ್ಬಿದ ಈ ಸುದ್ದಿ ನಗರದ ವಿವಿಧ ನ್ಯಾಯಾಲಯಗಳ ಕಾರಿಡಾರ್ ಗಳಲ್ಲಿ ಚರ್ಚೆಯಾಗುತ್ತಿದೆ. ಆದರೆ ಯಾರ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ.
ಲೋಕಾಯುಕ್ತ ಕೋರ್ಟ್ ನ್ಯಾ. ಎನ್.ಕೆ.ಸುಧೀಂದ್ರ ರಾವ್ ಅವರನ್ನು ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿ ವರ್ಗಾವಣೆಗೊಳಿಸಲಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ, ಅನುಮಾನ ಬಾರದಂತೆ ಸುಧೀಂದ್ರ ರಾವ್ ಸೇರಿದಂತೆ ಸುಮಾರು 17 ಜನ ನ್ಯಾಯಾಧೀಶರನ್ನು ವರ್ಗಾ ಮಾಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಲೋಕಾಯುಕ್ತ ವಿಶೇಷ ಕೋರ್ಟ್ ನ್ಯಾಯಾಧೀಶರಾಗಿದ್ದ ಸಿ.ಬಿ.ಹಿಪ್ಪರಗಿ ಸೇರಿದಂತೆ 174 ನ್ಯಾಯಾಧೀಶರನ್ನು 2011 ಎಪ್ರಿಲ್ ತಿಂಗಳಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದೇ ರೀತಿ ಸುಧೀಂದ್ರರಾವ್ ಅವರನ್ನು ವರ್ಗ ಮಾಡಲಾಗುತ್ತದೆ.
ಈ ಮಧ್ಯೆ ಲೋಕಾಯುಕ್ತ ಕೋರ್ಟ್ ಸರಕಾರಿ ವಿಶೇಷ ಅಭಿಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಮೋದ್ ಚಂದ್ರ ಅವರೂ ಕೂಡ ನವೆಂಬರ್ ತಿಂಗಳ ಕೊನೆಗೆತಮ್ಮ ಹುದ್ದೆಯಿಂದ ನಿವೃತ್ತಿಯಾಗಲಿದ್ದಾರೆ ಎಂಬ ಸುದ್ದಿ ಇದೆ.
ಕೆಐಎಡಿಬಿ ಭೂ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಸಹ ಆರೋಪಿಗಳು ಜೈಲಿಗೆ ಹೋಗಲು ಪ್ರಮೋದ್ ಚಂದ್ರರ ಸಮರ್ಥ ವಾದ ಕೂಡ ಒಂದು ಕಾರಣ ಎನ್ನಲಾಗಿದೆ. ರಾಜಕಾರಣಿಗಳು ಜೈಲು ಸೇರುವ ಪರ್ವಕ್ಕೆ ಫುಲ್ ಸ್ಟಾಪ್ ಹಾಕಲು ಸರ್ಕಾರ ಯತ್ನಿಸುತ್ತಿದೆ.
ಹಾಗಾದರೆ ನ್ಯಾ. ಸುಧೀಂದ್ರರಾವ್ ಕೈಲಿರುವ ಪ್ರಕರಣಗಳ ಗತಿಯೇನು..?