ವಧು ಸಿಗದ ಬ್ರಾಹ್ಮಣ ಹುಡುಗರ ಬೃಹತ್ ಜಾಥಾ
ಈಗಲೇ ಹೀಗಾದರೆ ಹೇಗೆ? ಇನ್ನು ಕೆಲ ದಶಕಗಳ ಕಾಲ ಈ ಸಮಸ್ಯೆ ಹೀಗೆಯೇ ಮುಂದುವರಿದರೆ ಇಡೀ ಬ್ರಾಹ್ಮಣ ಸಮುದಾಯವೇ ನಶಿಸಿ ಹೋಗುವ ಅಪಾಯದಲ್ಲಿದೆ ಎನ್ನುವ ಅಂಶ ಕಾಡುತ್ತಿದೆ. ಮದುವೆಗೆ ರೆಡಿಯಾಗಿ ನಿಂತಿರುವ ವರಗಳಿಗೆ ವಧುಗಳನ್ನು ಹುಡುಕುವುದೇ ದುಸ್ತರವಾಗುತ್ತಿದೆ.
ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಬ್ರಾಹ್ಮಣ ಜಾಗೃತಿ ಮತ್ತು ಸಾಮರಸ್ಯ ಪಾದಯಾತ್ರೆ ಅಭಿಯಾನವನ್ನು ಡಿಸೆಂಬರ್ 11 ಮತ್ತು 12ರಂದು ಹಮ್ಮಿಕೊಳ್ಳಲಾಗಿದ್ದು, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯವರೆಗೆ ಪಾದಯಾತ್ರೆ ಮಾಡಲು ಉದ್ದೇಶಿಸಲಾಗಿದೆ.
ಈ ಅಭಿಯಾನದ ಸಂಘಟಕ ಆನಂದ್ ಅವರ ಪ್ರಕಾರ, ಮೊದಲಾದರೆ ಗಂಡುಗಳಿಗೆ 25ರೊಳಗೆ ಮತ್ತು ಹೆಣ್ಣುಗಳಿಗೆ 22ರೊಳಗೆ ಮದುವೆಯಾಗುತ್ತಿತ್ತು. ಆದರೆ ಈಗ, ಗಂಡಿಗೆ 32 ವರ್ಷ ದಾಟಿದರೂ ಮದುವೆಯಾಗುವ ಯೋಗ ಕೂಡಿ ಬರುತ್ತಿಲ್ಲ. ಕುಟುಂಬ ಯೋಜನೆಯೇ ದೊಡ್ಡ ಸಮಸ್ಯೆಯಾಗಿದೆ.
ಕರ್ನಾಟಕದ ಕನ್ಯಾಮಣಿ ಡೇಟಾಬೇಸ್ ತಯಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಮತ್ತು ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶದಿಂದಲೂ ಬ್ರಾಹ್ಮಣ ಹುಡುಗಿಯರ ವಿವರ ಪಡೆಯುವ ಉದ್ದೇಶವಿದೆ. ಜೊತೆಗೆ ಶಿಕ್ಷಣ ಮತ್ತು ಉದ್ಯೋಗದ ಜಾಗೃತಿ ಮೂಡಿಸುವ ಉದ್ದೇಶವೂ ಇದೆ.
ಬಿಎ, ಬಿಎಸ್ ಸಿ, ಬಿಕಾಂ ಮಾಡಿರುವ ಹುಡುಗರು ಹೋಗಲಿ ಇಂಜಿನಿಯರಿಂಗ್ ಮಾಡಿರುವವರೂ ಇತರರೊಂದಿಗೆ ರಿಂಗಾ ರಿಂಗಾ ಆಡುವಂತಾಗಿದೆ. ಸ್ವಉದ್ಯೋಗ ಮಾಡುತ್ತಿರುವ ಪಡ್ಡೆಗಳ ಪಾಡಂತೂ ಬೇಡವೇ ಬೇಡ. ಈ ಅಭಿಯಾನಕ್ಕೆ ನ. 27ರಂದು ಮಲ್ಲೇಶ್ವರದ ರಾಮಮಂದಿರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು ಚಾಲನೆ ನೀಡಲಿದ್ದಾರೆ.