ಸೋದರನಿಗೆ ಬೆದರಿಕೆ: ರಕ್ಷಣೆಗೆ ನ್ಯಾ ಸುಧೀಂದ್ರರಾವ್ ಮೊರೆ
ಗಮನಾರ್ಹವೆಂದರೆ, ಸುಮಾರು ಮೂರು ತಿಂಗಳಿಂದ ರಾಜ್ಯದ ಆಡಳಿತಾರೂಢ ರಾಜಕಾರಣಿಗಳಿಗೆ ಪರಪ್ಪನ ಅಗ್ರಹಾರ ಜೈಲು ಮಾರ್ಗ ತೋರಿಸಿ, ಭ್ರಷ್ಟರಿಗೆ ಸಿಂಹಸ್ವಪ್ನರಾಗಿರುವ ನ್ಯಾ ಸುಧೀಂದ್ರರಾವ್ ಅವರಿಗೇ ಪ್ರಾಣ ಬೆದರಿಕೆ ಇದೆ. ಆದರೆ ಇತ್ತೀಚೆಗೆ ಅವರಿಗೆ ಪೊಲೀಸ್ ರಕ್ಷಣೆ ಕಲ್ಪಿಸಲು ಸರಕಾರ ಮುಂದಾಗಿತ್ತು.
'ತಾನು ಯಾವುದೇ ಬೆದರಿಕೆಗೆ ಭಯಪಡುವವನಲ್ಲ. ತನಗೆ ರಕ್ಷಣೆ ಬೇಡ. ಆ ರಾಘವೇಂದ್ರ ಸ್ವಾಮಿಯ ಆಶೀರ್ವಾದವೊಂದಿರಲಿ ಸಾಕು ಎಂದು ನ್ಯಾ ಸುಧೀಂದ್ರರಾವ್ ರಕ್ಷಣೆಯನ್ನು ನಿರಾಕರಿಸಿದ್ದರು. ಆದರೆ ಈಗ ತನ್ನಿಂದಾಗಿ ಸೋದರನಿಗೆ ಭೀತಿ ಎದುರಾಗಿರುವಾಗ ನ್ಯಾ ಸುಧೀಂದ್ರರಾವ್ ಅವರು ಅನಿವಾರ್ಯವಾಗಿ ಪೊಲೀಸ್ ರಕ್ಷಣೆಯ ಮೊರೆಹೋಗಿದ್ದಾರೆ.
ಸಂಪಂಗಿ ಅವರು ಸ್ಥಳೀಯ ಶಾಸಕರಾಗಿದ್ದು, ಪ್ರಭಾವಿ ವ್ಯಕ್ತಿಯಾಗಿರುವುದರಿಂದ ಲೋಕಾಯುಕ್ತ ಪೊಲೀಸರು ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕೋಲಾರ ಎಸ್ಪಿಗೆ ಪತ್ರ ಬರೆದಿದ್ದು, ಕೇಂದ್ರ ವಲಯ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೂ ಪತ್ರದ ಪ್ರತಿಯನ್ನು ರವಾನಿಸಿದ್ದು, ಬದರಿನಾಥ್ ಗೆ ರಕ್ಷಣೆ ಒದಗಿಸುವಂತೆ ಕೋರಿದ್ದಾರೆ.
ನ. 11ರಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಸಂಪಂಗಿ, ಸುಧೀಂದ್ರ ರಾವ್ ಪೂರ್ವಗ್ರಹಪೀಡಿತರಾಗಿದ್ದಾರೆ ಎಂದು ಆರೋಪಿಸಿದ್ದು, ತಮ್ಮ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಬೇರೊಬ್ಬ ನ್ಯಾಯಾಧೀಶರಿಗೆ ವರ್ಗಾವಣೆ ಮಾಡುವಂತೆ ಕೋರಿದ್ದರು. ಬದರಿನಾಥ್ ಅವರು ಕಾಂಗ್ರೆಸ್ ಕಾರ್ಯಕರ್ತರಾಗಿರುವುದೇ ಬಿಜೆಪಿ ಶಾಸಕರಾದ ತಮ್ಮನ್ನು ಸುಧೀಂದ್ರರಾವ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕಾರಣ ಎಂದೂ ದೂರಿದ್ದರು.
ಹೀಗೆ ಆರೋಪಿ ಶಾಸಕರು ನ್ಯಾಯಾಲಯದ ವಿಚಾರಣೆಯ ವಿಷಯದಲ್ಲಿ ನ್ಯಾಯಾಧೀಶರ ಸಹೋದರನ ಹೆಸರನ್ನು ಎಳೆದು ತಂದಿರುವ ಬೆನ್ನಲ್ಲೇ, ಬದರಿನಾಥ್ ಅವರಿಗೆ ಅಪಾಯ ಇದೆ ಎಂಬ ಮಾಹಿತಿಯೂ ಲೋಕಾಯುಕ್ತ ಪೊಲೀಸರಿಗೆ ಮನದಟ್ಟಾಗಿದೆ.