ಒಬ್ಬನೇ ಮಗ, ಪ್ಲೀಸ್ ಜಾಮೀನು ಕೊಡಿ: ಜ್ಯೂ. ಕಟ್ಟಾ
ಅಪ್ಪನಿಗೆ ಕ್ಯಾನ್ಸರ್ ಇದೆ. ಅವರನ್ನು ಲಂಡನ್ ಗೆ ಕರೆದುಕೊಂಡು ಹೋಗಬೇಕಾದರೆ ಜೊತೆಯಲ್ಲಿ ನಾನು ಕೂಡ ಇರಬೇಕಾಗುತ್ತದೆ. ತಂದೆಗೆ ಚಿಕಿತ್ಸೆ ಕೊಡಿಸಲು ಅನುಕೂಲವಾಗುವಂತೆ ದಯವಿಟ್ಟು ನನಗೆ ಜಾಮೀನು ನೀಡಿ ಎಂದು ಕಟ್ಟಾ ಜಗದೀಶ್ ಕೋರಿದ್ದಾರೆ. ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 8ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಟ್ಟಾ ಸುಬ್ರಮಣ್ಯ ನಾಯ್ದು ಪುತ್ರ ಕಟ್ಟಾ ಜಗದೀಶ್ ಜಾಮೀನು ಕೋರಿ ಲೋಕಾಯುಕ್ತ ನ್ಯಾಯಾಲಯಕ್ಕೆ ಸೋಮವಾರ (ನ 21) ಮತ್ತೆ ಅರ್ಜಿ ಸಲ್ಲಿಸಿದ್ದಾರೆ.
ನನ್ನ ತಾಯಿ ಕೂಡಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ರಕ್ತದೊತ್ತಡ, ಮಂಡಿ ನೋವಿನ ಚಿಕಿತ್ಸೆ ಮಾಡಿಸಬೇಕಿದೆ. ನನಗೂ ಒಂದು ಚಿಕ್ಕ ಮಗುವಿದೆ. ಈ ಎಲ್ಲಾ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಅನುಕಂಪದ ಆಧಾರದ ಮೇಲೆ ನನಗೆ ಪ್ಲೀಸ್.. ಜಾಮೀನು ನೀಡಿ ಎಂದು ಕಟ್ಟಾ ಜಗದೀಶ್ ಬೇಡಿ ಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಾ ಜಗದೀಶ್ ಅವರಿಗೆ ಜಾಮೀನು ನೀಡಲು ಕೋರ್ಟ್ ಈ ಹಿಂದೆಯೇ ನಿರಾಕರಿಸಿತ್ತು. ಈದೀಗ ಮತ್ತೆ ಜೂನಿಯರ್ ಕಟ್ಟಾ ತಂದೆಯ ಅನಾರೋಗ್ಯ ಸಂಬಂಧ ಜಾಮೀನು ನೀಡಬೇಕೆಂದು ಲಿಖಿತ ಹೇಳಿಕೆ ನೀಡಿ ಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಈ ಸಂಬಂಧ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.