ಯುವತಿಯರಿಗೆ ಕಂಟಕವಾಗಿದ್ದ ಸಯನೈಡ್ ಮೋಹನ್ ವಿಚಾರಣೆ ಆರಂಭ
ಕುತೂಹಲದ ವಿಷಯವೆಂದರೆ ಮೋಹನ್ಕುಮಾರ್ ತಾನೇ ವಕೀಲನಾಗಿ ತನ್ನ ವಿರುದ್ಧದ ಪ್ರಕರಣಗಳ ವಿಚಾರಣೆಯಲ್ಲಿ ವಾದ ಮಂಡಿಸುತ್ತಿದ್ದಾನೆ. ಮಂಗಳೂರಿನ ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ನಿಂಗನ ಗೌಡ ಜಂಟ್ಲಿ ವಿಚಾರಣೆ ನಡೆಸಿದರು.
ತನಗೆ ಯಾವ ವಕೀಲರೂ ಬೇಡ. ತಾನೇ ವಾದಿಸುವುದಾಗಿ ಆರೋಪಿ ಮೋಹನ್ ಕುಮಾರ್ ಕಳೆದ ಅ.20ರಂದು ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸಿದ್ದ. ಇದಕ್ಕಾಗಿ ಆತ ಕಳೆದ ಎರಡು ವರ್ಷಗಳಲ್ಲಿ ಹಲವು ಕಾನೂನು ಪುಸ್ತಕಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿದ್ದಾನೆ. ತನ್ನ ವಿರುದ್ಧ ಸಿಒಡಿ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾನೆ ಎಂಬುದು ಅವನ ಇಂದಿನ ವಾದಗಳಿಂದ ಸಾಬೀತಾಗುತ್ತಿತ್ತು.
ದೋಷಾರೋಪ ಪಟ್ಟಿಯಲ್ಲಿ ಏನಿದೆ, ಅದಕ್ಕೆ ಉತ್ತರವಾಗಿ ನ್ಯಾಯಾಧೀಶರ ಎದುರು ತಾನೇನು ಹೇಳಬೇಕು ಎಂಬುದನ್ನು ಮೋಹನ್ ಮೊದಲೇ ಹಾಳೆಯಲ್ಲಿ ಬರೆದಿಟ್ಟುಕೊಂಡಿದ್ದ. ಸಾಕ್ಷಿಯ ಹೇಳಿಕೆ ಬಳಿಕ ತಾನು ಬರೆದಿಟ್ಟುಕೊಂಡಿದ್ದ ಹೇಳಿಕೆಯನ್ನು ಆತ ಓದಿ ಹೇಳುತ್ತಿದ್ದ.
ಎರಡು ವರ್ಷಗಳ ಹಿಂದೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಯುವತಿಯರ ಸರಣಿ ಕೊಲೆ ಪ್ರಕರಣದ ಆರೋಪಿ ಮೋಹನ್ಕುಮಾರನನ್ನು 2009ರ ಅಕ್ಟೋಬರ್ 11ರಂದು ಬಂಟ್ವಾಳ ಪೊಲೀಸರು ಬಂಧಿಸಿದ್ದರು.