ಜಯಲಲಿತಾ: ಕಾಂಗ್ರೆಸಿನಿಂದ ದೂರ; ಅಡ್ವಾಣಿಗೆ ಹತ್ತಿರ ಹತ್ತಿರಾ?
ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಅಡ್ವಾಣಿಯೇ ಅಧಿನಾಯಕ ಎಂಬುದು ಬಹಿರಂಗ ಗುಟ್ಟಾಗಿರುವ ಸಂದರ್ಭದಲ್ಲಿ ಜಯಲಲಿತಾರ ಈ ನಡೆ ಕುತೂಹಲಕಾರಿಯಾಗಿದೆ. ಇದರಿಂದ ಜಯಾ, ಅಡ್ವಾಣಿಗೆ (ಬಿಜೆಪಿಗೆ) ಹತ್ತಿರಾವಾಗುತ್ತಿರುವುದು ಸ್ಪಷ್ಟವಾಗಿದೆ.
ರಾಮಲೀಲಾ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭಕ್ಕೆ ತಮ್ಮ ಪ್ರತಿನಿಧಿಯಾಗಿ ಎಂ. ತಂಬಿದೊರೈ ಅವರನ್ನು ಕಳಿಸಿರುವುದಾಗಿ ದೂರವಾಣಿ ಮೂಲಕ ಜಯಾ ಈಗಾಗಲೇ ಅಡ್ವಾಣಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲ. ಕೊಯಮತ್ತೂರಿನಲ್ಲಿ ಯಾತ್ರೆ ವೇಳೆ ಪತ್ತೆಯಾದ ಬಾಂಬಿನಿಂದ ಏನಾದರೂ ಅನಾಹುತ ಘಟಿಸಿದ್ದರೆ ಆ ಶ್ರೀರಾಮ ತನ್ನನ್ನು ಕ್ಷಮಿಸುತ್ತಿರಲಿಲ್ಲ. ಸುದೈವದಿಂದ ಅಂಥದ್ದೇನೂ ನಡೆಯಲಿಲ್ಲ ಎಂದು ಜಯಾ ಇದೇ ವೇಳೆ ನಿಟ್ಟುಸಿರುಬಿಟ್ಟರು ಎಂದೂ ಅಡ್ವಾಣಿ ಆಪ್ತರು ಹೇಳಿದ್ದಾರೆ.
2014ರ ವರೆಗೂ ಲೋಕಸಭೆ ಚುನಾವಣೆ ಸಾಧ್ಯತೆ ಇಲ್ಲವಾದರೂ ಸಂಸತ್ತಿನ ಚಳಿಗಾಲದ ಅಧಿವೇಶನದ ಹೊಸ್ತಿಲಿನಲ್ಲಿ ಜಯಾ ಅವರು ಬಿಜೆಪಿ ಬಾಗಿಲು ಬಡಿಯುತ್ತಿರುವುದು ಗಮನಾರ್ಹವಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಜಯಾ ಯುಪಿಎ ಬಗ್ಗೆ ಅಸಮಾಧಾನಗೊಂಡಿರುವುದು ಇದರಿಂದ ಸ್ಪಷ್ಟವಾಗಿದೆ. ಕಳೆದ ಜೂನ್ ನಲ್ಲಿ ತಮಿಳುನಾಡು ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಜಯಾ ಬೇಡಿಕೆಯಿಟ್ಟಾಗ ಪ್ರಧಾನಿ ಸಿಂಗ್ ಅದಕ್ಕೆ ಕ್ಯಾರೇ ಎನ್ನಲಿಲ್ಲ ಎಂಬುದು ಜಯಾರ ಪ್ರಧಾನ ಅಳಲು.