ಗಾಲಿ ಕರುಣಾಕರ ರೆಡ್ಡಿ ಕಣ್ಣೆ ಮುಚ್ಚೆ ಕಾಡೆ ಗೂಡೆ
ಅತ್ಲಾಗೆ ತಮ್ಮ ಸೋಮಶೇಖರನಂತೆ ಶ್ರೀರಾಮುಲುಗೆ ಬಹಿರಂಗವಾಗಿ ಬೆಂಬಲ ಸೂಚಿಸದೆ, ಇತ್ಲಾಗೆ ಬಿಜೆಪಿಯ ಅಭ್ಯರ್ಥಿ ಗಾದಿ ಲಿಂಗಪ್ಪನಿಗೂ ಮತ ಯಾಚಿಸಲು ಬರದೆ ಕಣ್ಣೆ ಮುಚ್ಚೆ ಕಾಡೆ ಗೂಡೆ ಆಟವಾಡುತ್ತಿದ್ದಾರೆ. ಅವರು ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಒಂದೇ ಒಂದು ಹೇಳಿಕೆಯನ್ನೂ ನೀಡಿಲ್ಲ.
ಆದರೆ, ಬಿಜೆಪಿ ನಾಯಕರಿಗೆ ಮಾತ್ರ ಅವರು ಬಿಜೆಪಿ ಪರವಾಗಿಯೇ ಇದ್ದಾರೆಂಬ ಭರವಸೆ. ಅವರು ಈಗ ಎಲ್ಲೇ ಇದ್ದರೂ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಬರುತ್ತಾರೆ ಎಂದು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ವಿಶ್ವಾಸ ಹೊಂದಿದ್ದಾರೆ. ಕರುಣಾಕರ ಅವರ ದ್ವಂದ್ವ ಅಥವಾ ತಟಸ್ಥ ನೀತಿ ಪಕ್ಷದ ಕಾರ್ಯಕರ್ತರನ್ನೂ ದಿಗಿಲು ಬೀಳಿಸಿದೆ.
ಯಡಿಯೂರಪ್ಪನವರೂ ಬಿಜೆಪಿ ಪರವಾಗಿ ಪ್ರಚಾರಕ್ಕೆ ಬರುತ್ತಿದ್ದಾರೆಂದು ತಿಳಿದ ಕೂಡಲೆ ಶ್ರೀರಾಮುಲು ಬಾಲ ಹಿಡಿದಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಬಿಜೆಪಿ ಪರವಾಗಿರುವುದಾಗಿ ಹೇಳಿ ಶ್ರೀರಾಮುಲುವಿಗೆ ಕೈ ಕೊಟ್ಟಿದ್ದಾರೆ. ಈ ಬೆಳವಣಿಗೆಗಳು ಸಹಜವಾಗಿ ಶ್ರೀರಾಮುಲುವನ್ನು ಏಕಾಂಗಿಯನ್ನಾಗಿ ಮಾಡಿವೆ. ರಾಮುಲು ಪರ ಹೋದರೆ ಪಕ್ಷದಿಂದ ಉಚ್ಛಾಟನೆಯ ಶಿಕ್ಷೆ ಎದುರಿಸಬೇಕಾಗುತ್ತದೆಂದು ಏನೂ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ.