ನ್ಯಾ. ಹೆಗ್ಡೆ ಇನ್ನಾದರೂ ಮೌನ ಮುರಿದು ಮಾತನಾಡಿ, ಪ್ಲೀಸ್
ಅದಕ್ಕೂ ಮುನ್ನ ತಮ್ಮ ವರದಿಯೇ ಸೋರಿಕೆಯಾಯಿತು ಎಂದಾಗ ಮಾರನೆಯ ದಿನವೇ ಸುದ್ದಿಗೋಷ್ಟಿ ಕರೆದು ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಅತ್ತು ಕರೆದಿರಿ. ಅದಕ್ಕೂ ಮುನ್ನ ಪರಮಾಧಿಕಾರ ನೀಡಲಿಲ್ಲವೆಂದು ಲೋಕಾಯುಕ್ತಕ್ಕೇ ರಾಜೀನಾಮೆ ಬಿಸಾಕಿ ಹೊರಟಿರಿ.
ಈ ಮಧ್ಯೆ, ಇಂತಹ ಅನೇಕ ಪ್ರಸಂಗಗಳು ಬಂದು ಹೋಗಿವೆ. ದಾರಿಯಲ್ಲಿ ಹೋಗುವವರ ಮಾತುಗಳಿಗೆಲ್ಲ ಪ್ರತಿಕ್ರಿಯಿಸುವುದಿಲ್ಲ ಎಂದು ಮಗುಮ್ಮಾಗಿ ಕುಳಿತಿರಿ. ಅದನ್ನೇ ಪಂಚಾಮೃತ ಅಂದ್ಕೊಂಡು ಹೆಗ್ಡೆ ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಯಿತು. ನಿಮ್ಮ ರಾತ್ರಿ ಖರ್ಚುಗಳ ಬಗ್ಗೆ ಯಾರೋ ಮಾತನಾಡಿದಾಗ ಅವರ ರಾತ್ರಿ ಲೀಲೆಗಳನ್ನು ನಾನು ಬಲ್ಲೆ ಎಂದು ಕುಡಿನೋಟ ಬೀರಿದಿರಿ. ಆದರೆ ನ್ಯಾ. ಸಂತೋಷ ಹೆಗ್ಡೆ ಅವರೇ ....
ಈಗೇಕೆ ಈ ಪರಿಯ ಮೌನ. ಸ್ವತಃ ನಿಮ್ಮದೇ ಶಿಷ್ಯ ಸಾಗರದಾಚೆಯಿಂದ ನಿಮ್ಮತ್ತ ನೇರವಾಗಿ 'ಬಾಣ' ಬಿಟ್ಟಿದ್ದಾರೆ. ಅದು ಹೇಗೆ ನಮ್ಮ ನಾಡಿನಲ್ಲಿ ಹೇಗೆ ಮಾರ್ದನಿಸುತ್ತಿದೆ ಎಂಬುದು ನಿಮ್ಮ ಕಿವಿಗೆ ಸ್ಪಷ್ಟವಾಗಿ ಕೇಳಿಸುತ್ತಿದೆ. ಆದರೂ ನೀವೇಕೆ ದಿವ್ಯ ಮೌನ ವಹಿಸಿದ್ದೀರಿ. ನಿಮ್ಮ ಶಿಷ್ಯ ಬಿಟ್ಟ ಬಾಣಬಿರುಸುಗಳಿಂದ ಪ್ರೇರಿತರಾಗಿ ಇವರೆಲ್ಲ ನಿಜಕ್ಕೂ ಭ್ರಷ್ಟರು ಎಂಬ ಭೇದಭಾವವೂ ಇಲ್ಲದೆ ಬಹುತೇಕ ಎಲ್ಲರೂ ನಿಮ್ಮ ಮೇಲೆ ಮುರುಕೊಂಡು ಬೀಳುತ್ತಿದ್ದಾರೆ. ಆದರೂ ನೀವೇಕೆ ದಿವ್ಯಮೌನಿಯಾಗಿದ್ದೀರಿ.
ಸಾಕ್ಷಾತ್ ಮಾಜಿ ಮುಖ್ಯಮಂತ್ರಿಯೇ ನಿಮ್ಮನ್ನು ಕುರಿತು 'ತಾನು ಕಳ್ಳ, ಪರರನ್ನು ನಂಬ' ಎಂದು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ. ಸೋ ತಡ ಮಾಡಬೇಡಿ. ಇನ್ನಾದರೂ ತಕ್ಷಣ ಒಂದು ಸುದ್ದಿಗೋಷ್ಠಿ ನಡೆಸಿ, ನ್ಯಾ. ಸಂತೋಷ ಹೆಗ್ಡೆಯೂ ಭ್ರಷ್ಟರೇ ಎಂದು ಅಮಾಯಕ ಜನರೂ ನಿಮಗೆ ಹಣೆಪಟ್ಟಿ ಹಚ್ಚುವ ಮುನ್ನ ಅದೇನಿದೆಯೋ ಹೇಳಿಬಿಡಿ, ಪ್ಲೀಸ್ ಜನ ಕಾಯುತ್ತಿದ್ದಾರೆ.