ಕುಮಾರಸ್ವಾಮಿ ನನ್ನ ಆತ್ಮೀಯ ಸ್ನೇಹಿತ : ಶ್ರೀರಾಮುಲು
ಟಿವಿ9 (ಚಕ್ರವ್ಯೂಹ) ಮತ್ತು ಸುವರ್ಣ ನ್ಯೂಸ್ (ಟಾರ್ಗೆಟ್) ಭಾನುವಾರ (ನ.13) ಏಕಕಾಲದಲ್ಲಿ ಪ್ರಸಾರವಾದ ಕಾರ್ಯಕ್ರಮಗಳಲ್ಲಿ ತೆಲುಗು ಮಿಶ್ರಿತ ಕನ್ನಡ ಮಾತನಾಡುತ್ತಿದ್ದ ಶ್ರೀರಾಮುಲು, "ನಾನು ಸ್ವಾಭಿಮಾನಿ ಮನುಷ್ಯ, ನನಗೆ ಬಿಜೆಪಿಯಿಂದ ನೋವಾಗಿದೆ, ಅದಕ್ಕಾಗಿ ಪಕ್ಷವನ್ನು ತೊರೆದೆ. ದೇವರಲ್ಲಿ ನಂಬಿಕೆ ಇರುವವನು ನಾನು. ಬಡವರನ್ನು ಕಂಡರೆ ನನಗೆ ಕನಿಕರವಿದೆ. ಜನರು ಕಷ್ಟ ಎಂದು ಬಂದಾಗ ನನ್ನ ಮನೆ ಅವರಿಗೆ ಕೊಡಲೂ ನಾನು ಹಿಂದೆ ಮುಂದೆ ನೋಡುವಂಥ ಮನುಷ್ಯನಲ್ಲ" ಎಂದು ಮನದಾಳದ ಮಾತನ್ನು ಹೊರಗೆಡವಿದರು.
"ಬಳ್ಳಾರಿ ಅಲ್ಲದೆ ಉತ್ತರ ಕರ್ನಾಟಕದ ಭಾಗದಲ್ಲಿ ಜನರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಅವರ ಮನೆಮಗನಾಗಿ ಸೇವೆ ಮಾಡಿಕೊಂಡು ಬಂದಿದ್ದೇನೆ. ನನ್ನ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ಸಂಬಂಧವೇನೂ ಇಲ್ಲ. ಜಾತ್ಯತೀತ ಜನತಾದಳ ಬಳ್ಳಾರಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ನಿಲ್ಲಿಸದೇ ಇರುವುದು ಆ ಪಕ್ಷದ ನಿರ್ಧಾರ ಹೊರತು ಬೇರೇನೂ ಇಲ್ಲ" ಎಂದು ಶ್ರೀರಾಮುಲು, ತಮ್ಮ ವಿರುದ್ಧ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದ ಬಗ್ಗೆ ಸ್ಪಷ್ಟಪಡಿಸಿದರು.
ಈ ಮರುಚುನಾವಣೆಯಲ್ಲಿ ಜನರು ನನ್ನನ್ನು ಆಶೀರ್ವದಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ನಮ್ಮ ಬಳಿ ದುಡ್ಡು ಇದೆ, ದುಡ್ಡು ಕೊಟ್ಟು ವೋಟು ಖರೀದಿಸುತ್ತಾರೆ ಎನ್ನುವ ಮಾತು ಸುಳ್ಳು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಮಾನವೇ ಅಂತಿಮ. ನನ್ನ ಭಾಗದ ಜನರನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೇನೆ. ಇದೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಅವರು ವಿಶ್ವಾಸದಿಂದ ನುಡಿದರು. ಮುಂದುವರಿಯಲಿದೆ....