ರೆಕ್ಕೆ ಮುರಿದ ಹಕ್ಕಿ ಕಿಂಗ್ಫಿಷರ್ನಿಂದ ಸದಸ್ಯರಿಗೆ ಪತ್ರ
ಸಿಕ್ಕಾಪಟ್ಟೆ ದುಬಾರಿ ಟಿಕೆಟ್ ಬೆಲೆ ಮತ್ತು ಕಡಿಮೆ ಪ್ರತಿಫಲದಿಂದಾಗಿ ಸಂಸ್ಥೆ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿರುವುದು ನಿಜವಾದರೂ, ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಸಿಬ್ಬಂದಿಗಳ ಕೊರತೆಯಿಂದಲ್ಲ. ಗ್ರಾಹಕರಿಗೆ ಅನನುಕೂಲವಾಗಿರುವುದಕ್ಕೆ ಕ್ಷಮೆ ಕೋರುತ್ತೇವೆ ಎಂದು ಉಪಾಧ್ಯಕ್ಷ ಅನ್ಶು ಸರೀನ್ ಪತ್ರ ಬರೆದಿದ್ದಾರೆ.
ಈ ಕ್ಷಣ ಸಂಸ್ಥೆ ನಾನಾ ಸವಾಲುಗಳನ್ನು ಎದುರಿಸುತ್ತಿದೆ. ದೀರ್ಘಕಾಲದ ಲಾಭ ಗಳಿಸುವ ಉದ್ದೇಶದಿಂದ ಕೆಲ ಕ್ರಮಗಳನ್ನು ಕಿಂಗ್ಫಿಷರ್ ತೆಗೆದುಕೊಳ್ಳುತ್ತಿದೆ. ಈ ಕಾರಣದಿಂದಾಗಿ ಸಂಸ್ಥೆಯ ರೂಪುರೇಷೆಯನ್ನೇ ಬದಲಾಯಿಸಲಾಗುತ್ತಿದೆ. ಇದಕ್ಕೆ ಕೆಲ ಸಮಯ ಬೇಕಾಗಿರುವುದರಿಂದ ವಿಜಯ್ ಮಲ್ಯ ಮಾಲಿಕತ್ವದ ಸಂಸ್ಥೆ ಕೆಲ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಬೇಕಾಯಿತು ಎಂದಿದ್ದಾರೆ ಸರೀನ್.
ಆಂತರಿಕ ಮಾರ್ಪಾಡುಗಳೆಲ್ಲ ಪೂರ್ತಿಯಾದ ಮೇಲೆ ಎಲ್ಲ 350 ವಿಮಾನಗಳು ದಿನನಿತ್ಯ ಹಾರಾಟ ನಡೆಸಲಿವೆ. ಅಲ್ಲಿಯವರೆಗೆ ಸದಸ್ಯರು ತಾಳ್ಮೆಯಿಂದ ಇರಬೇಕು ಮತ್ತು ಸಹಕರಿಸಬೇಕು ಎಂದು ಅವರು ಕೋರಿದ್ದಾರೆ. ಆದರೆ, ಬಿಕ್ಕಟ್ಟಿನಿಂದ ಹೊರತರಲು ಕೇಂದ್ರ ಸರಕಾರವನ್ನು ಕೇಳಿರುವುದು ಸತ್ಯ. ಕಿಂಗ್ ಫಿಷರ್ ಕಂಪನಿಯನ್ನು ರಕ್ಷಿಸಲು ಬ್ಯಾಂಕ್ ಗಳೇ ಮುಂದೆ ಬರಬೇಕೆಂದು ಆರ್ಥಿಕ ಸಚಿವರು ಬ್ಯಾಂಕ್ ಗಳನ್ನು ಕೇಳಿದ್ದಾರೆ.