ಕೃಷ್ಣಯ್ಯ ಶೆಟ್ಟಿಯಿಂದ ಯಡ್ಡಿಗೆ ಲಡ್ಡು, ಕೈದಿಗಳಿಗೆ ಬೇಡ್ಶೀಟ್
ಭೂ ಹಗರಣದಲ್ಲಿ ಬಂಧಿತರಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕೃಷ್ಣಯ್ಯ ಶೆಟ್ಟಿ ಜೈಲು ಸೇರಿದ್ದರು. ಕೇಂದ್ರ ಕಾರಾಗೃಹದ ವಿಶೇಷ ಭದ್ರತಾ ವಿಭಾಗದಲ್ಲಿ ವಿಐಪಿ ಸೌಲಭ್ಯ ಪಡೆದಿದ್ದ ಶೆಟ್ಟಿಗೆ ಜೈಲಿನೊಳಗೆ ಸಾಮಾನ್ಯ ಕೈದಿಗಳು ಅನುಭವಿಸುವ ಕಷ್ಟವು ಅರಿವಿಗೆ ಬಂತು. ಈಗ ಸೆರೆಮನೆಯಿಂದ ಮುಕ್ತರಾದ ಬಳಿಕ ಶೆಟ್ಟರು ಕೈದಿಗಳ ನೆರವಿಗೆ ಮುಂದಾಗಿದ್ದಾರೆ.
ಸೆಂಟ್ರಲ್ ಜೈಲಿನ 500 ಮಂದಿ ಪುರುಷ ಕೈದಿಗಳಿಗೆ ಬೇಡ್ಶೀಟ್ ಹಾಗೂ 200 ಮಹಿಳಾ ಕೈದಿಗಳಿಗೆ ಸೀರೆ ಮತ್ತು ರಗ್ಗು ವಿತರಿಸಲು ಕೃಷ್ಣಯ್ಯಶೆಟ್ಟಿ ಗುರುವಾರ ಸಂಜೆಯೇ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಆದರೆ ಕೈದಿಗಳ ಸಂದರ್ಶನದ ಸಮಯ ಮೀರಿದ್ದರಿಂದ ಜೈಲಿನ ಅಧಿಕಾರಿಗಳು ಸೀರೆ ಮತ್ತು ಹೊದಿಕೆಯ ವಿತರಣೆಗೆ ಅನುಮತಿ ನಿರಾಕರಿಸಿದರು. ಹೀಗಾಗಿ ಕೃಷ್ಣಯ್ಯ ಶೆಟ್ಟಿ ಶುಕ್ರವಾರ ಕೈದಿಗಳಿಗೆ ಸೀರೆ ಮತ್ತು ರಗ್ಗು ವಿತರಿಸಲಿದ್ದಾರೆ.
ಬಿಎಸ್ವೈಗೆ ತಿರುಪತಿ ಲಡ್ಡು: ಈ ಮಧ್ಯೆ, ಭೂ ಹಗರಣದಲ್ಲಿ ಬಂಧಿತರಾಗಿ ತಮ್ಮೊಂದಿಗೆ ಜಾಮೀನು ಮೇಲೆ ಬಿಡುಗಡೆಗೊಂಡ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃಷ್ಣಯ್ಯ ಶೆಟ್ಟಿ ಗುರುವಾರ ತಿರುಪತಿ ಲಡ್ಡು ನೀಡಿದರು.
ಜೈಲಿನಿಂದ ಬಂಧ ಮುಕ್ತರಾಗುತ್ತಿದ್ದಂತೆ ಶೆಟ್ಟಿ ತಮ್ಮ ನೆಚ್ಚಿನ ದೈವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರಯಾಣ ಬೆಳೆಸಿದ್ದರು. ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸ್ವಕ್ಷೇತ್ರ ಮಾಲೂರಿಗೆ ತೆರಳಿ ಸ್ಥಳೀಯ ಬಿಜೆಪಿ ಕಾರ್ಯಕರ್ತರರೊಂದಿಗೆ ಸಮಾಲೋಚಿಸಿ, ಬೆಂಗಳೂರಿಗೆ ಹಿಂತಿರುಗಿದರು. ರೇಸ್ಕೋರ್ಸ್ ನಿವಾಸದಲ್ಲಿ ಬಿಎಸ್ವೈ ಭೇಟಿಯಾದ ಕೃಷ್ಣಯ್ಯ ಶೆಟ್ಟಿ, ಮಾಜಿ ಸಿಎಂಗೆ ತಿರುಪತಿ ಪ್ರಸಾದ ನೀಡಿದ್ದಾರೆ.