ಕಸಬ್ ಗಲ್ಲುಶಿಕ್ಷೆಗೆ ಪಾಕಿಸ್ತಾನದಿಂದ ನೋ ಅಬ್ಜೆಕ್ಷನ್
ಬಾಲಿ, ನ.10: 2008ರ ಮುಂಬೈ ಉಗ್ರರ ದಾಳಿ ಪ್ರಮುಖ ಆರೋಪಿ ಅಜ್ಮಲ್ ಕಸಬ್ ನನ್ನು ಉಗ್ರ ಎಂದು ಪರಿಗಣಿಸುತ್ತೇವೆ. ಆತನ ಗಲ್ಲುಶಿಕ್ಷೆಗೆ ನಮ್ಮ ಅಭ್ಯಂತರ ಏನೂ ಇಲ್ಲ ಎಂದು ಪಾಕಿಸ್ತಾನದ ಆಂತರಿಕ ಸಚಿವ ರೆಹ್ಮಾನ್ ಮಲಿಕ್ ಹೇಳಿದ್ದಾರೆ.
ಸಾರ್ಕ್ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಭಾರತದ ಪ್ರಶ್ನೆಗಳನ್ನು ಎದುರಿಸಲು ಪೂರ್ವ ಸಿದ್ಧತೆ ನಡೆಸಿರುವ ಪಾಕಿಸ್ತಾನ ಕಸಬ್ ವಿಷಯವಾಗಿ ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸಿದೆ.
166 ಜನರ ಸಾವಿಗೆ ಕಾರಣನಾಗಿರುವ ಕಸಬ್ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ. ಮೇ.6, 2010 ರಂದು ಮುಂಬೈ ಕೋರ್ಟ್ ನಲ್ಲಿ ಕಸಬ್ ಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆದೇಶಿಸಲಾಗಿತ್ತು.
ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಬದುಕುಳಿದಿರುವ ಏಕೈಕ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ ಗಲ್ಲುಶಿಕ್ಷೆಗೆ ಅ.10 ರಂದು ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.
ಹಳೆಯದನ್ನು ಮರೆತು ಶಾಂತಿ ಮಾತುಕತೆ ನಡೆಸಲು ಪಾಕ್ ಪ್ರಧಾನಿ ಗಿಲಾನಿ ಸೂಕ್ತ ವ್ಯಕ್ತಿ ಎಂದು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಇತ್ತೀಚೆಗೆ ಹೇಳಿದ್ದರು.