ಮಂಗಳೂರಲ್ಲಿ ಕ್ರೈಸ್ತನ ಹೆಸರು ಹೇಳುವುದು ಅಪರಾಧ!
ಅವರು ಏನು ಮಾಡುತ್ತಿದ್ದಾರೆ, ಎಲ್ಲೆಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದಾರೆ, ಯಾರ್ಯಾರ ಮನೆಗೆ ಹೋಗುತ್ತಾರೆ, ಎಂಥ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ ಎಂಬುದನ್ನು ಕ್ರೈಸ್ತ ಧರ್ಮ ವಿರೋಧಿಗಳು ಗಮನಿಸುತ್ತಿದ್ದಾರೆ ಎಂಬ ಭಯ ಅವರನ್ನು ಕಾಡುತ್ತಿದೆ. ಇದರಿಂದಾಗಿ ನಿರ್ಭಯವಾಗಿ ಓಡಾಡುವುದು ಅಸಾಧ್ಯವಾಗಿದೆ ಎನ್ನುತ್ತಾರೆ ಧರ್ಮಬೋಧಕರು.
ಈ ಧರ್ಮ ಬೋಧಕರ ಪ್ರಕಾರ, ಚರ್ಚಿಗೆ ಬರುವ ಭಕ್ತಾದಿಗಳನ್ನು ಕೂಡ ಚರ್ಚಿಗೆ ಹೋಗದಂತೆ ತಡೆಯಲಾಗುತ್ತಿದೆ, ಹೋಗುವವರನ್ನು ಬೆದರಿಸಲಾಗುತ್ತಿದೆ. ಈ ಹೆದರಿಕೆ ಶುರವಾಗಿದ್ದು ಚರ್ಚ್ ದಾಳಿ ಶುರುವಾದ 2008ರಿಂದಲ್ಲ 1996ರಿಂದಲೇ ಹೆದರಿಕೆಯ ನೆರಳಲ್ಲೇ ಜೀವನ ಸಾಗಿಸುವಂತಾಗಿದೆ.
ಹಳೆಯಂಗಡಿಯಲ್ಲಿರುವ ಹೆಬ್ರನ್ ಅಸೆಂಬ್ಲಿಯ ರೆ. ಪ್ರಸನ್ನ, ಶಕ್ತಿನಗರದಲ್ಲಿರುವ ಗ್ಲೋರಿಯಸ್ ಚರ್ಚ್ನ ರೆ. ಜಾಯ್ ಪೀಟರ್, ಮದಾನಿ ನಗರದಲ್ಲಿರುವ ಫೌಂಟೇನ್ ಆಫ್ ಬ್ಲೆಂಸಿಂಗ್ಸ್ನ ರೆ. ಪಿ.ಟಿ.ಜೋಸನ್, ಕರ್ನಾಟಕ ನೆಟ್ವರ್ಕ್ ಮಿಷನ್ನ ವಾಲ್ಟರ್ ಮೇಬನ್ ಮುಂತಾದವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಚರ್ಚೆಗೆ ಬರುವ ಜನರ ವಾಹನಗಳ ಟೈರುಗಳನ್ನು ಸುಟ್ಟುಹಾಕಲಾಗುತ್ತಿದೆ, ಸಂಜೆ ಹೊತ್ತಿನಲ್ಲಿ ಬರುವವರನ್ನು ಬೆದರಿಸಲಾಗುತ್ತಿದೆ. ಇದರಿಂದಾಗಿ ಪೊಲೀಸ್ ಗಸ್ತಿನಲ್ಲಿಯೇ ಪ್ರಾರ್ಥನೆಗಳನ್ನು ಮಾಡುವಂತಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಧರ್ಮಪ್ರಚಾರಕರ ಮೇಲಾದ ದೌರ್ಜನ್ಯಕ್ಕೆ ಪ್ರತಿಯಾಗಿ ದೂರನ್ನು ಕೂಡ ಪೊಲೀಸರು ಸ್ವೀಕರಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.