ಗುಡಿಯಲ್ಲಿ ಗೋಮಾಂಸ : ಕೋಲಾರದಲ್ಲಿ ಕೋಮು ಕಲಹ
ಅಮ್ಮವಾರಿ ಪೇಟೆಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಗೋಮಾಂಸದ ಚೂರುಗಳನ್ನು ಹಾಕಿದ್ದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳ ಗಮನಕ್ಕೆ ಬಂದಿದೆ. ಈ ಸುದ್ದಿಯನ್ನು ಹಿಂದೂ ಪರ ಸಂಘಟನೆಗಳ ಮುಖಂಡರಿಗೆ ಮುಟ್ಟಿಸಲಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಹಿಂದೂ ಪರ ಸಂಘಟನೆಗಳು ನಗರದಾದ್ಯಂತ ಮೆರವಣಿಗೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಲು ಒತ್ತಾಯಿಸಿದರು.
ಮೆರವಣಿಗೆ ಮುಸ್ಲಿಂ ಬಂಧುಗಳೇ ಹೆಚ್ಚಾಗಿರುವ ಗಡಿಯಾರ ಗೋಪುರ (ಕ್ಲಾಕ್ ಟವರ್) ಪ್ರದೇಶಕ್ಕೆ ಬಂದಾಗ ವಹಿವಾಟು ಸ್ಥಗಿತಗೊಳಿಸಲು ವ್ಯಾಪಾರಿಗಳಿಗೆ ತಾಕೀತು ಮಾಡಲಾಗಿದೆ. ಇದನ್ನು ಮುಸ್ಲಿಂ ವ್ಯಾಪಾರಿಗಳು ವಿರೋಧಿಸಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಎರಡು ಪಂಗಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಪೋಕರಿಗಳನ್ನು ಚೆದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು.
ಈ ಸಂದರ್ಭದಲ್ಲಿ ಪೊಲೀಸರಿಗೂ ಕಲ್ಲೇಟು ಬಿದ್ದು ಓರ್ವ ಪೇದೆಗೆ ಗಾಯವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಜಿಲಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಥಳಕ್ಕೆ ಅಗಮಿಸಿ ಎರಡು ಕಡೆಯವರನ್ನು ಚೆದರಿಸಲು ಪೊಲೀಸರಿಗೆ ಸಹಕಾರಿಯಾಗಿ ನಿಂತರು. ರಾಜಕೀಯ ಪಕ್ಷಗಳ ಮುಖಂಡರ ಸಲಹೆಯಂತೆ ಮುಸ್ಲಿಂ ಸಂಘಟನೆಗಳಾದ ಅಂಜುಮನ್ ಹಾಗೂ ವಕ್ಫ್ ಮುಖಂಡರು ದೇವಾಲಯಕ್ಕೆ ಆಗಮಿಸಿ ಆವರಣದಲ್ಲಿ ನಡೆಯುತ್ತಿದ್ದ ಸ್ವಚ್ಛತಾ ಕಾರ್ಯಕ್ಕೆ ಮುಂದಾದರು.
ಈ ಬಗ್ಗೆ ಹಿಂದೂ ಪರ ಸಂಘಟನೆ ಮುಖಂಡರು ಅವಕಾಶ ನೀಡಲಿಲ್ಲ. ಮದ್ಯ ಪ್ರವೇಶಿಸಿ ಜಿಲ್ಲಾಧಿಕಾರಿ ಮೀನಾರವರು ಎರಡು ಕಡೆಯ ಮುಖಂಡರ ಮನಒಲಿಸಲು ಯಶಸ್ವಿಯಾದರು. ಕೇಂದ್ರ ವಲಯ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಅಗಮಿಸಿ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅಪರಾಧ ಪ್ರಕ್ರಿಯಾ ಸಂಹಿತೆ(ಸಿಆರ್ಪಿಸಿ)ಯ ಕಾಯ್ದೆಯ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಗರದಲ್ಲಿ ಕುದಿಮೌನ ಮನೆಮಾಡಿದೆ.