ಟ್ಯಾಬ್ಲೆಟ್ಟು ಬುಕ್ ನುಂಗಿ ಮಠ ಗುರುಪ್ರಸಾದ್ ಹೇಳಿದ್ದೇನು?
ನಾವು ಹುಟ್ಟಿದಾಗಿಂದ ಬೇರೆ ಬೇರೆ ರೀತಿಯಲ್ಲಿ ಸಮಾಜದ ಋಣದಲ್ಲಿ ಬದುಕಿರುತ್ತೇವೆ. ತಮಗೆ ಸಾಫ್ಟ್ ವೇರ್ ಕೆಲಸ ಇದೆ, ಕೈತುಂಬಾ ದುಡ್ಡಿದೆ ಅಂತ ತಮ್ಮ ಪಾಡಿಗೆ ತಾವಿರದೇ ಸಮಾಜಕ್ಕೆ ಯಾವುದಾದರೂ ರೀತಿಯಲ್ಲಿ ಋಣ ತೀರಿಸಬೇಕು.
ಈ ಪುಸ್ತಕವೂ ಕೂಡ ಆ ನಿಟ್ಟಿನಲ್ಲಿ ಮಾಡಿದ ಕೆಲಸ ಅಂದರು. ಇವತ್ತು ನಿರೀಕ್ಷಿತ ಗುಣಮಟ್ಟದಲ್ಲಿ ಕನ್ನಡ ಸಿನೆಮಾಗಳು ಬರದಿರುವುದಕ್ಕೆ ಸಿನೆಮಾರಂಗದಲ್ಲಿ ಸಾಹಿತ್ಯದ, ಓದಿನ ಗಂಧಗಾಳಿಯೂ ಇಲ್ಲದವರೇ ಜಾಸ್ತಿಯಾಗಿರುವುದೂ ಒಂದು ಕಾರಣ. ಆದ್ದರಿಂದ ಸಾಹಿತ್ಯ ಓದಿಕೊಂಡಿರುವವರು, ಬರಹಗಾರರು ದಯವಿಟ್ಟು ಮುಂದೆ ಬಂದು ಸಿನೆಮಾರಂಗದ ಜೊತೆ ಕೈಜೋಡಿಸಬೇಕು ಎಂದು ಕರೆಕೊಟ್ಟರು.
ಪುಸ್ತಕದಲ್ಲಿ ಏನಿದೆ?: ಅಂದಹಾಗೆ, 'ತಿನ್ನಲಾರದ ಬಿಸ್ಕತ್ತು, ನುಂಗಲಾರದ ಟ್ಯಾಬ್ಲೆಟ್ಟು' ಪುಸ್ತಕ ಕಂಪ್ಯೂಟರ್, ಇಂಟರ್ನೆಟ್ ಮುಂತಾದ ತಂತ್ರಜ್ಞಾನ ಸಂಬಂಧಿತ ಬರಹಗಳ ಸಂಗ್ರಹ. ಇದರಲ್ಲಿ ಕಂಪ್ಯೂಟರ್ ಮತ್ತು ಅಂತರಜಾಲದ ವಿಷಯಗಳ ಬಗ್ಗೆ, ಇವತ್ತಿನ ದಿನಗಳಲ್ಲಿ ಬಂದಿರುವ, ಬರುತ್ತಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಬರಹಗಳಿವೆ.
ಜನರಿಗೆ, ವಿದ್ಯಾರ್ಥಿಗಳಿಗೆ ಈ ವಿಷಯಗಳನ್ನು ತಿಳಿದುಕೊಳ್ಳಲು ಸುಲಭವಾಗುವಂತೆ ಕಾರ್ಟೂನ್ ಚಿತ್ರಗಳನ್ನು ಬಳಸಲಾಗಿದೆ. ಬಿಟ್ ಬೈಟ್ ಲೆಕ್ಕದಿಂದ ಹಿಡಿದು ಕ್ಲೌಡ್ ಕಂಪ್ಯೂಟಿಂಗ್ ವರೆಗೂ ಕುತೂಹಲಕಾರಿ ವಿಷಯಗಳಿವೆ.
ಎಲ್ಲಾ ಸೇವೆಗಳನ್ನೂ, ವ್ಯವಹಾರಗಳನ್ನೂ ಅಂತರಜಾಲದ ಮೂಲಕ ನಿರ್ವಹಿಸುವ ಸೌಲಭ್ಯ ಬರುತ್ತಿರುವ ಈ ದಿನಗಳಲ್ಲಿ ಈ ಪುಸ್ತಕ ಎಲ್ಲರಿಗೂ ಅಂತರಜಾಲಾಡಲು, ಕಂಪ್ಯೂಟರ್, ಗ್ಯಾಡ್ಜೆಟ್ ಗಳನ್ನು ಧೈರ್ಯವಾಗಿ, ಸುರಕ್ಷಿತವಾಗಿ ಬಳಸಲು ಪ್ರೇರೇಪಿಸಿಸುವಂತಿದೆ.
ಪುಸ್ತಕವನ್ನು www.akrutibooks.com ತಾಣದಲ್ಲಿ ಆನ್ ಲೈನ್ ಶಾಪಿಂಗ್ ಕೂಡ ಮಾಡಬಹುದು. ಲೇಖಕ ಶ್ರೀನಿಧಿ ಟಿ.ಜಿ. ಮತ್ತು ಪ್ರಕಾಶಕ ಗುರುಪ್ರಸಾದ್ ರಿಗೆ ಅಭಿನಂದನೆಗಳು.