ವೀರಶೈವರು ಹಿಂದೂಗಳಲ್ಲ - ಶ್ರೀಗಳ ಹೊಸ ಬಾಂಬ್
ವೀರಶೈವ ಧರ್ಮ ಯಾವತ್ತೂ ಹಿಂದೂ ಧರ್ಮದ ಅಂಗವಲ್ಲ. ವೀರಶೈವ ಧರ್ಮ ಎನ್ನುವುದು ಒಂದು ಸ್ವತಂತ್ರ ಪಂಥ. ಕೆಲವರು ವೀರಶೈವ ಧರ್ಮವನ್ನು ಹಿಂದೂ ಧರ್ಮದ ಅಂಗಸಂಸ್ಥೆ ಎನ್ನುವಂತೆ ಬಿಂಬಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದು ನಿಡುಮಾಮಿಡಿ ಮಹಾಸಂಸ್ಥಾನ ಹಾಗೂ ಮಾನವಧರ್ಮ ಪೀಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು ಹೊಸ ಬಾಂಬ್ ಸಿಡಿಸಿದ್ದಾರೆ.
ವೈದಿಕ ಧರ್ಮಕ್ಕೆ ಪ್ರತಿಯಾಗಿ ಹುಟ್ಟಿದ್ದು ವೀರಶೈವ ಧರ್ಮ. ಕರ್ಮ ಕಂದಾಚಾರದಿಂದ ಜನತೆಯನ್ನು ಮುಕ್ತಿಗೊಳಿಸಿ ಅವರಿಗೆ ಹೊಸ ಬದುಕು ಸೃಷ್ಟಿಸಿ ಕೊಳ್ಳಲು ವೀರಶೈವ ಧರ್ಮ ಹುಟ್ಟಿ ಕೊಂಡಿತೆ ವಿನಃ ಅದು ಯಾವತ್ತೂ ಹಿಂದೂ ಧರ್ಮವಾಗಿಲ್ಲ ಆಗುವುದೂ ಇಲ್ಲ ಎಂದು ಕಡ್ಡಿ ಮುರಿದಾಗೆ ಹೇಳಿಕೆ ನೀಡಿದ್ದಾರೆ.
ಶ್ರೀ ಜಗದ್ಗುರು ಪಂಚಾಚಾರ್ಯರು ಸ್ಥಾಪಿಸಿದ ಪಂಚಪೀಠ ಗಳಲ್ಲಿ ರಾಜ್ಯದ ರಂಭಾಪುರಿ ಮಠವೂ ಒಂದು. ದೇಶದ ಉಳಿದ ನಾಲ್ಕು ಪಂಚಪೀಠಗಳೆಂದರೆ ಉತ್ತರಪ್ರದೇಶದ ವಾರಣಾಸಿ, ಆಂಧ್ರಪ್ರದೇಶದ ಶ್ರೀಶೈಲ, ಮಧ್ಯಪ್ರದೇಶದ ಉಜ್ಜೈನಿ ಮತ್ತು ಉತ್ತರಾಂಚಲದ ಕೇದಾರ. ಈ ಎಲ್ಲಾ ಪಂಚಪೀಠ ಗಳಲ್ಲಿ ಶೈವ ಜ್ಯೋತಿರ್ಲಿಂಗವಿದೆ.
ಲಿಂಗಾಯತ ಮತ್ತು ವೀರಶೈವ ಧರ್ಮಗಳು ಬೇರೆ ಬೇರೆ. ಲಿಂಗಾಯತವು ವಿಶ್ವಗುರು ಬಸವಣ್ಣ ಅವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ ಎನ್ನವುದು ಇತಿಹಾಸ ಪುಟ ತಿರುಚಿದರೆ ನಮಗೆ ಸಿಗುವ ಮಾಹಿತಿ. ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾದ ರಂಭಾಪುರಿ ಶ್ರೀಗಳಿಂದ ನಿಡುಮಾಮಿಡಿ ಸ್ವಾಮೀಜಿಗಳ ಈ ಹೇಳಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಸದ್ಯಕ್ಕೆ ವರದಿಯಾಗಿಲ್ಲ.