ಹಲಸೂರು ಠಾಣೆಯಲ್ಲೊಂದು 'ಗಲಾಟೆ' ಮದುವೆ
ಹಲಸೂರಿನ ಎಂವಿ ಗಾರ್ಡನ್ ನಿವಾಸಿ ಸತೀಶ್ ಕುಮಾರ್ ಹೌಸ್ ಕೀಪರ್ ಕೆಲಸ ಮಾಡಿಕೊಂಡಿದ್ದ. ಅಶೋಕ ನಗರ ವ್ಯಾಪ್ತಿಯ ಆಸ್ಟಿಂಗ್ ಟೌನ್ ನಿವಾಸಿ ಸೋಫಿಯಾ ಜೊತೆ ಎರಡು ವರ್ಷದಿಂದ ಪ್ರೇಮ ವ್ಯವಹಾರ ನಡೆಸುತ್ತಿದ್ದ. ಸೋಫಿಯಾ ತಾಯಿಗೆ ಹುಷಾರಿಲ್ಲದ ಸಮಯದಲ್ಲಿ ಆಸ್ಪತ್ರೆಯಲ್ಲಿ ನೆರವಾಗಿ ಸೋಫಿಯಾಗೆ ಹತ್ತಿರವಾಗಿದ್ದ.
ಆದರೆ, ಇಬ್ಬರ ಪ್ರೇಮಕ್ಕೆ ಎರಡು ಕಡೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ. ಆದರೆ, ಸ್ನೇಹಿತರು ಕೆಲ ಬಂಧು ಮಿತ್ರರ ಸಹಾಯ ಪಡೆದು ಸತೀಶ ಹಾಗೂ ಸೋಫಿಯಾ ಮದುವೆಗೆ ಎಲ್ಲಾ ಸಿದ್ಧತೆ ನಡೆಸಿದ್ದರು. ನಿಶ್ಚಿತಾರ್ಥ ಕೂಡಾ ನೆರವೇರಿಸಿ, ಕಲ್ಯಾಣಮಂಟಪ, ಮದುವೆ ಮುಹೂರ್ತ ನ.2ರಂದು ಫಿಕ್ಸ್ ಆಗಿತ್ತು.
ರಾತ್ರೋರಾತ್ರಿ ವರ ನಾಪತ್ತೆ: ಇನ್ನೇನು ಹಸಮಣೆ ಏರಿ ಸುಖ ದಾಂಪತ್ಯದ ಕನಸು ಕಾಣುತ್ತಿದ್ದ ಸೋಫಿಯಾಗೆ ಕಳೆದ ರಾತ್ರಿ ಶಾಕ್ ಆಯಿತು. ವರ ಮಹಾಶಯ ನಾಪತ್ತೆಯಾಗಿದ್ದ. ಜೋಗುಪಾಳ್ಯದ ಪಾಲಿಕೆ ಸಮುದಾಯ ಭವನದಲ್ಲಿ ಮದುವೆಯ ಅರತಕ್ಷತೆ ಸಂದರ್ಭದಲ್ಲಿ ಸತೀಶ್ ಕಣ್ಮರೆ ಗೊಂದಲಕ್ಕೆ ಕಾರಣವಾಗಿತ್ತು.
ವರದಕ್ಷಿಣೆ ಡಿಮ್ಯಾಂಡ್, ಜಮಖಾನ: ವಧುವಿನ ಮನೆ ಕಡೆಯವರು ಜಮಖಾನ ಕೊಡಲಿಲ್ಲ ಎಂದು ವರನ ಕಡೆಯವರು ಕಿರಿಕ್ ಶುರು ಮಾಡಿದ್ದರು. ವರನಿಗೆ 50 ಸಾವಿರ ರೂ, ಎರಡು ಸವರನ್ ಚಿನ್ನ ನೀಡಬೇಕು ಎಂದು ಆಗ್ರಹ ಆರಂಭವಾಗಿತ್ತು.
ಹಲಸೂರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಸೋಫಿಯಾ ಮನೆಯವರು ವರದಕ್ಷಿಣೆ ಬೇಡಿಕೆ ದೂರು ನೀಡಿದ್ದರೆ, ಸತೀಶ್ ಕಡೆಯವರು ಹಲ್ಲೆ ಹಾಗೂ ಅವಮಾನ ಆಗಿದೆ ಎಂದು ದೂರಿದ್ದಾರೆ.
ಮದುವೆ ಆಗಲು ಇಬ್ಬರು ಬಿಲ್ ಕುಲ್ ಒಪ್ಪದ ಕಾರಣ ಪೊಲೀಸರು ಯಾವ ಕೇಸ್ ತೆಗೆದುಕೊಳ್ಳಬೇಕು ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಠಾಣೆಯಲ್ಲೇ ಇಬ್ಬರ ಮದುವೆಯಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಇಲ್ಲ ವಿವಾಹ ಮುರಿದು ಬಿದ್ದಿದೆ ಎಂದು ಮೂಲಗಳು ತಿಳಿಸಿದೆ.