ರಾಜಮರ್ಯಾದೆಯೊಂದಿಗೆ ಘೋರ್ಪಡೆಗೆ ಅಂತಿಮ ವಿದಾಯ
ಘೋರ್ಪಡೆ ಅವರ ಅತ್ಯಂತ ಪ್ರಿಯವಾದ ಶಿವಪುರ ಅರಮನೆಯಿಂದ ಅವರ ಪಾರ್ಥೀವ ಶರೀರವನ್ನು ಸಂಡೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ, ಮಹಾರಾಜ ವಂಶಜರನ್ನು ಅಗ್ನಿಸ್ಪರ್ಶ ಮಾಡುವ ಛತ್ರಿಘಾಟ್ (ಶಿವಾಜಿಪಾರ್ಕ್)ಗೆ ಕರೆತರಲಾಯಿತು. ಪಾರ್ಥಿವ ಶರೀರಕ್ಕೆ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಂತೆಯೇ ಜಿಲ್ಲಾಡಳಿತ ಮತ್ತು ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರು ಗೌರವ ನಮನಗಳನ್ನು ಸಲ್ಲಿಸಿ, ಮೂರು ಸುತ್ತು ಕುಶಾಲತೋಪುಗಳನ್ನು ಸಿಡಿಸುವ ಮೂಲಕ ಅಂತಿಮ ನಮನ ಸಲ್ಲಿಸಿದರು.
10.30ಕ್ಕೆ ಅಂತಿಮ ವಿಧಿವಿಧಾನ ಸಂಪ್ರದಾಯದಂತೆ ಪ್ರಾರಂಭವಾಯಿತ್ತು. ಹಿರಿಯ ಪುತ್ರರಾದ ಅಜೇಯ ಎಂ ಘೋರ್ಪಡೆ, ಸುಜಯೇ ಘೋರ್ಪಡೆ, ಕಾರ್ತೀಕೇಯ ಎಂ ಘೋರ್ಪಡೆ, ಪುತ್ರಿಯಾದ ಅನುರಾಧ ವೀರೇಶ್ ದಾಯಬಾರ್, ಮೊಮ್ಮಕ್ಕಳುಗಳಾದ ಏಕಾಂಬರ್, ಅದರ್ಶ, ಕೃತಿಕಾ ಸೇರಿದಂತೆ ಘೋರ್ಪಡೆಯವರ ಸಹೋದರರಾದ ಶಿವಾಜಿರಾವ್ ಘೋರ್ಪಡೆ, ವೆಂಕಟರಾವ್ ಘೋರ್ಪಡೆ ಇವರು ಅಂತಿಮ ನಮನವನ್ನು ಸಲ್ಲಿಸಿ ತುಳಸಿದಳವನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್ಸಿಂಗ್ ರಾಣೆ, ಕಾಂಗೈ ಮುಖಂಡರಾದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಡಿ.ಅರ್. ಪಾಟೀಲ್, ಎಂಎಲ್ಸಿ ಕೆ.ಸಿ.ಕೊಂಡಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವ ಎಂ. ದಿವಾಕರ ಬಾಬು, ಡಾ|| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು, ಸೊಂಡೂರಿನ ಪ್ರಭುಮಹಾಸ್ವಾಮಿಗಳು, ಮುಷ್ಟರೂ ಶ್ರೀಗಳಾದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ರಾಜ್ಯ ಸಭಾ ಸದಸ್ಯ ಅನಿಲ್ ಲಾಡ್. ಕಲಘಟಗಿ ಶಾಸಕ ಸಂತೋಷ ಲಾಡ್, ಅಮರೇಗೌಡ ಬಯ್ಯಾಪೂರ, ಸೊಂಡೂರಿನ ಶಾಸಕ ಈ ತುಕಾರಾಂ, ಡಾ. ಏಕನಾಥ ಲಾಡ್, ಸಾಲಿ ಸಿದ್ದಯ್ಯ ಸ್ವಾಮಿ, ಶಿರಾಜ್ ಷೇಕ್, ನಾಜಿಮ್ ಷೇಕ್, ಸೇರಿದಂತೆ ಹಲವಾರು ಗಣ್ಯರುಗಳು ಪಾಲುಗೊಂಡಿದ್ದರು.