ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಮುಖಾಮುಖಿ
ಸಿಎಂ ಸದಾನಂದ ಗೌಡ ಉತ್ತಮ ವ್ಯಕ್ತಿ. ಆದರೆ ಅವರಿಗೆ ಅಧಿಕಾರ ನಡೆಸೋಕೆ ಮಾಜಿ ಮುಖ್ಯಮಂತ್ರಿ ಬಿಡಬೇಕಲ್ಲಾ. ಜೈಲಿನಲ್ಲಿ ಕೂತೇ ಕ್ಯಾಬಿನೆಟ್ ಮೀಟಿಂಗ್ ಮಾಡುವ ವ್ಯಕ್ತಿಗೆ ಪಕ್ಷದ ಮೇಲಿನ ಹಿಡಿತದ ಮುಂದೆ ಸದಾನಂದ ಗೌಡ ಯಾವ ಲೆಕ್ಕಕ್ಕೂ ಇಲ್ಲ. ಯಡಿಯೂರಪ್ಪ ಮಾತು ಕೇಳಿಲ್ಲಾಂದ್ರೆ ಸದಾನಂದ ಗೌಡ್ರ ಖುರ್ಚಿಗೆ ಸಂಚಕಾರ ಬರುತ್ತೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.
ನನಗೆ ಲಾಲ್ ಕೃಷ್ಣ ಆಡ್ವಾಣಿಯವರ ಬಗ್ಗೆ ಬಹಳ ಗೌರವವಿದೆ. ಅವರ ಹೋರಾಟದ ಬದುಕು, ರಾಜಕೀಯದಲ್ಲಿ ಅವರು ನಡೆದು ಕೊಂಡು ಬಂದ ದಾರಿಯ ಬಗ್ಗೆ ಮೆಚ್ಚುಗೆ ಇದೆ. ಆದರೆ ಈಗ ಯಾವ ಮುಖ ತೋರಿಸಿಕೊಂಡು ಜನಚೇತನ ಯಾತ್ರೆಯ ಮೂಲಕ ರಾಜ್ಯಕ್ಕೆ ಬರುತ್ತಿದ್ದಾರೆಂದು ಮೊದಲು ಸ್ಪಷ್ಟ ಪಡಿಸಲಿ. ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ವಾಪಾಸ್ ತರಿಸಬೇಕೆಂದು ಮೊದಲು ಹೋರಾಟ ಮಾಡಿದವರು ಅವರು, ಈಗ ರಾಜ್ಯದಲ್ಲಿ ನಡಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅವರ ನಿಲುವೇನು ಎಂದು ದೇವೇಗೌಡ ತನ್ನ ಎಂದಿನ ವ್ಯಂಗ್ಯ ದಾಟಿಯಲ್ಲಿ ಚಾಟಿ ಬೀಸಿದ್ದಾರೆ.
ನನ್ನ ಮಗ ಬಾಲಕೃಷ್ಣ ಗೌಡ ವಿರುದ್ದ ಕೇಸ್ ನಡೆಯುತ್ತಿದೆ. ಕೋರ್ಟ್ ಏನು ತೀರ್ಪು ನೀಡುತ್ತೋ ನೀಡಲಿ, ಆ ಮೇಲೆ ಅದರ ಬಗ್ಗೆ ಕಾಮೆಂಟ್ ಮಾಡುತ್ತೇನೆ. ಭ್ರಷ್ಟರು ಯಾರೇ ಇರಲಿ ಅದು ನನ್ನ ಕುಟುಂಬದವರಾಗಲಿ ಈ ದೇವೇಗೌಡ ಯಾವತ್ತೂ ಹೋರಾಟ ನಡೆಸುತ್ತಾನೆ ಎಂದು ಗೌಡ್ರು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವ ಅನ್ನೋವುದೇ ಇಲ್ಲ. ಕೇಂದ್ರದ ಯುಪಿಎ ಸರಕಾರ ನನ್ನ ರಾಜಕೀಯ ಜೀವನದ ಅತಿ ಭ್ರಷ್ಟ ಸರಕಾರ. ದೇಶ ಇಂದೆಂದೂ ಕಾಣದ ಹಗರಣಗಳು ಈ ಸರಕಾರ ನಡೆಸಿದೆ ಎನ್ನುವುದು ಅವಮಾನ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ನಾಯಕರು ಏನು ಮಾಡಲು ಸಾಧ್ಯ? ಮಾಜಿ ಪ್ರಧಾನಿ ಸುವರ್ಣ ನ್ಯೂಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.