ಪ್ರಶಸ್ತಿಗಾಗಿ 1500 ಪುಟಗಳ ಅರ್ಜಿ ಕಳಿಸಿದ ಪುಣ್ಯಾತ್ಮ!
ಈ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಹಿಗ್ಗಿಸುವುದಿಲ್ಲ ಎಂದು ಗೌಡರು ತಾಯಿ ಭುವನೇಶ್ವರಿ ಎದುರಿಗೆ ಆಣೆ ಮಾಡಿದ್ದರು. ಕಳೆದ ವರ್ಷ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕಡೆ ಹಂತದಲ್ಲಿ ಎಳೆದಾಡಿ 25 ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 162 ಜನರಿಗೆ (ಎರಡು ವರ್ಷ ಸೇರಿ) ಪ್ರಶಸ್ತಿ ನೀಡಲಾಗಿತ್ತು.
ಈ ವರ್ಷ ಕೂಡ ಪ್ರಶಸ್ತಿ ಪಟ್ಟಿಯಲ್ಲಿ ತಮ್ಮ ಹೆಸರನ್ನೂ ಸೇರಿಸಿಕೊಳ್ಳಲು ಅರ್ಜಿ ಗುಜರಾಯಿಸಿದವರ ಸಂಖ್ಯೆಯೇನೂ ಕಡಿಮೆಯಿರಲಿಲ್ಲ. ಸುಮಾರು 4 ಸಾವಿರ ಅರ್ಜಿಗಳು ಬಂದು ಬಿದ್ದಿದ್ದವು. ಅರ್ಜಿಯ ಜೊತೆಗೆ ತಾವು ಗಳಿಸಿದ ಪ್ರಶಸ್ತಿ, ಪದಕ, ಪ್ರಮಾಣಪತ್ರಗಳನ್ನು ನೀಟಾಗಿ ಪಿನ್ ಮಾಡಿ ಕಳಿಸಿದ್ದರು. ಆದರೆ, ಅದೃಷ್ಟ ಒಲಿದಿದ್ದು 50 ಜನರಿಗೆ ಮಾತ್ರ!
ಒಬ್ಬ ಮಹಾನುಭಾವರಂತೂ 1500 ಪುಟಗಳ ಅರ್ಜಿ ಕಳಿಸಿದ್ದರಂತೆ (ಅವರ ಹೆಸರು ಗೌಪ್ಯವಾಗಿಡಲಾಗಿದೆ). ಅರ್ಜಿ ಸಲ್ಲಿಸಿದ್ದವರದು ಒಂದು ಗುಂಪಾದರೆ, ಪ್ರಶಸ್ತಿಗೆ ಹಪಹಪಿಸದ ಕೆಲ ಅರ್ಹ ಸಾಧಕರನ್ನು ಕೂಡ ಈ ಬಾರಿ ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಇಷ್ಟಾದರೂ ಒಂದು ಮಾತು ಗೌಡರು ತಪ್ಪಿದ್ದಾರೆ. ಕೇವಲ 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಪ್ರಶಸ್ತಿ ನೀಡುವುದಾಗಿ ವಾಗ್ದಾನ ನೀಡಿದ್ದರು. ಇವರಲ್ಲಿ ಮೂವರು 50 ವರ್ಷಕ್ಕಿಂತ ಕೆಳಗಿನವರು ನುಸುಳಿಕೊಂಡಿದ್ದಾರೆ. ಅವರು ಯಾರು, ಯಾವ ಕ್ಷೇತ್ರದಲ್ಲಿ 'ಸಾಧನೆ' ಮಾಡಿದ್ದಾರೆ ಎಂಬುದನ್ನು ತಿಳಿಯಲು ಸಂಪೂರ್ಣ ಪಟ್ಟಿ ನೋಡಿ.