ಬಹುಮುಖ ಪ್ರತಿಭೆಯ ಎಂವೈ ಘೋರ್ಪಡೆ ವಿಧಿವಶ
ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಎಂವೈ ಘೋರ್ಪಡೆಯವರ ಪಾರ್ಥೀವ ಶರೀರವನ್ನು ನಗರದ ಆರ್.ಎಂ.ವಿ. ಬಡಾವಣೆಯಲ್ಲಿರುವ ಅವರ ಗೃಹದಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇಡಲಾಗುವುದು. ನಂತರ ಅವರ ಶರೀರವನ್ನು ಬಳ್ಳಾರಿ ಜಿಲ್ಲೆಯ ಸಂಡೂರಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿದುಬಂದಿದೆ.
ಘೋರ್ಪಡೆಯವರು ದೇವರಾಜ್ ಅರಸು ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ನಂತರ ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಪಂಚಾಯತ್ ರಾಜ್ ಸಚಿವರಾಗಿದ್ದರು. ಸಂಡೂರು ಮ್ಯಾಂಗನೀಸ್ ಮತ್ತು ಕಬ್ಬಣ ಅದಿರು (ಸ್ಮಯೋರ್) ಕಾರ್ಖಾನೆ ಮಾಲಿಕರಾಗಿದ್ದ ಘೋರ್ಪಡೆಯವರು ಕೆಲವರ್ಷಗಳಿಂದ ರಾಜಕೀಯವಾಗಿ ತಟಸ್ಥರಾಗಿದ್ದರು.
ಅತ್ಯಂತ ಸಂಭಾವಿತ ವ್ಯಕ್ತಿತ್ವದವರಾಗಿದ್ದ ಘೋರ್ಪಡೆಯವರು ರಾಜಕೀಯವಾಗಿ ಅಂತಹ ಮಹತ್ವಾಕಾಂಕ್ಷಿಯಾಗಿರಲಿಲ್ಲ. ಬಾಯಿಯಲ್ಲಿ ಚಿನ್ನದ ಚಮಚ ಇಟ್ಟುಕೊಂಡೇ ಹುಟ್ಟಿದ್ದ ಎಂವೈ ಘೋರ್ಪಡೆಯವರು ಶಾಸಕರಾಗಿ, ಸಂಸದರಾಗಿ ವಿಭಿನ್ನ ಹುದ್ದೆಗಳನ್ನು ಅಲಂಕರಿಸಿದ್ದರೂ, ರಾಜಕೀಯಕ್ಕಿಂತ ಛಾಯಾಗ್ರಹಣ ಕ್ಷೇತ್ರದಲ್ಲಿ ಮಿಂಚಿದ್ದೇ ಹೆಚ್ಚು.
ಆದರ್ಶ ಮತ್ತು ಕ್ರಿಯಾಶೀಲತೆಯನ್ನೇ ಬದುಕಾಗಿಸಿಕೊಂಡಿದ್ದ ಅವರು ಜಗತ್ತಿನ ಅತ್ಯಂತ ಹಳೆಯದಾದ ಲಂಡನ್ ರಾಯಲ್ ಫೋಟೋಗ್ರಫಿಕ್ ಸಂಸ್ಥೆಯ ಸದಸ್ಯರಾಗಿದ್ದರು. ಘೋರ್ಪಡೆಯವರ ಕಪ್ಪುಬಿಳುಪು ವನ್ಯಜೀವಿ ಛಾಯಾಚಿತ್ರಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದ್ದವು. ವನ್ಯಜೀವಿ ಛಾಯಾಚಿತ್ರಕಲೆಯ ಬಗ್ಗೆ ಪುಸ್ತಕವನ್ನೂ ಅವರು ಬರಿದಿದ್ದಾರೆ.