ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ : ಭಯಭೀತರಾಗಿರುವ ಗ್ರಾಮಸ್ಥರು
ಕೋತೂರುವಿನ ಪೋರಂಗಡ ತಮ್ಮಯ್ಯ (ಗಾಂಧಿ) ಅವರಿಗೆ ಸೇರಿದ 2 ಹೋರಿ ಹಾಗೂ ಒಂದು ಹಸು, ಮುಕ್ಕಾಟಿರ ಮುತ್ತಣ್ಣ ಅವರ ಒಂದು ಹೋರಿ, ಕಟ್ಟೆಂಗಡ ಸಾಬು ಅವರ ಒಂದು ಕರು, ಕೆ.ಆರ್.ಸುರೇಶ್ ಅವರ 2 ದನ ಹಾಗೂ 2 ಮೇಕೆ, ಸಹೋದರ ಕೆ.ಆರ್.ಸತೀಶ್ ಅವರ 6 ರಾಸುಗಳು ಹಾಗೂ ವಿ.ಎ.ಪದ್ಮ ಅವರ ಒಂದು ಹಾಲು ಕರೆಯುವ ಹಸು ಸೇರಿದಂತೆ ಈವರೆಗೆ ಒಟ್ಟು 14 ಜಾನುವಾರು ಹಾಗೂ ಎರಡು ಮೇಕೆಗಳು ಹಾಗೂ ನಾಯಿಯೊಂದು ಹುಲಿಗೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ.
ಗ್ರಾಮಸ್ಥರ ಆಕ್ರೋಶ : ಕಳೆದ ಒಂದು ವಾರದಿಂದ ಹುಲಿ ಹಲವು ರೈತರ ಕೊಟ್ಟಿಗೆಯಲ್ಲಿ ಹಸು, ಕರುಗಳನ್ನು ಕೊಂದು ನಷ್ಟಪಡಿಸಿದೆ. ಅರಣ್ಯ ಇಲಾಖೆ ಬಂದು ಅಷ್ಟೋ-ಇಷ್ಟೋ ಪರಿಹಾರ ಕೊಟ್ಟು ಕೈತೊಳೆದುಕೊಳ್ಳುತ್ತಿದೆ. ಹಾಗಾಗಿ ಸಮಸ್ಯೆ ಅಲ್ಲಿಗೆ ಮುಗಿಯದೆ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ಒಂದೋ ನೀವೇ ಹುಲಿಯನ್ನು ಹಿಡಿಯಿರಿ, ಇಲ್ಲವೇ ನಮಗೆ ಗುಂಡು ಹೊಡೆಯಲು ಅವಕಾಶ ಕೊಡಿ. ನಿಮ್ಮ ಇಲಾಖೆಯಿಂದ ನಮಗೆ ಸಾಕಾಗಿದೆ. ರೈತರು ಏನಾದರೂ ತಪ್ಪು ಮಾಡಿಬಿಟ್ಟರೆ ಇಡೀ ಇಲಾಖೆಯೇ ಬಂದು ಬಂಧಿಸ್ತೀರಾ. ಈಗ ವ್ಯಾಘ್ರನಿಂದ ಇಷ್ಟೊಂದು ತೊಂದರೆ ಆಗಿದೆಯಲ್ಲ, ನೀವೇನು ಮಾಡುತ್ತಿದ್ದೀರಿ ಎಂದು ಗ್ರಾಮಸ್ಥರು ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪರಿಹಾರ ವಿತರಣೆ : ವಿಷಯ ತಿಳಿದ ಸ್ಪೀಕರ್ ಬೋಪಯ್ಯ ಸ್ಥಳಕ್ಕೆ ಆಗಮಿಸಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಕುಪ್ರಾಣಿಗಳ ಸಾವಿನಿಂದ ನಷ್ಟ ಅನುಭವಿಸಿರುವ ಕೃಷಿಕರಿಗೆ ಅರಣ್ಯ ಇಲಾಖೆ ವತಿಯಿಂದ ರೂ. 2.49 ಲಕ್ಷ ಪರಿಹಾರ ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.