ನ್ಯಾ. ಸುಧೀಂದ್ರರಾವ್ ಇನ್ನೂ 9 ವರ್ಷ ಕಾಲ ಭ್ರಷ್ಟರಿಗೆ ಬೆವರಿಳಿಸುತ್ತಾರೆ !
ಇವರು ಯಾವ ಜಿಲ್ಲೆಯವರೂ ಅಂದಿರಾ. ರಾಜಧಾನಿಗೆ ಆನಿಕೊಂಡಿರುವ ಕೋಲಾರ ಜಿಲ್ಲೆಯವರು. ಇಲ್ಲಿನ ಮುಳಬಾಗಲು ತಾಲೂಕಿನ ನಂಗಲಿಯವರು. ಜಿಲ್ಲಾ ಕೇಂದ್ರದಲ್ಲಿ ಕಾನೂನು ವ್ಯಾಸಂಗ ಮಾಡಿ ಕೋಲಾರ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಆರಂಭದಲ್ಲೇ ಒಂದಷ್ಟು ಮಂದಿಗೆ ಕಾನೂನಿನ ಓನಾಮ ಹೇಳಿಕೊಟ್ಟವರು. ನಂತರ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ಮಾಡಲಾರಂಭಿಸಿದರು.
ಸಿವಿಲ್, ರೆವೆನ್ಯೂ ಮತ್ತು ಕ್ರಿಮಿನಲ್ ಸೆಕ್ಷನ್ ಗಳಲ್ಲಿ ಪಾಂಡಿತ್ಯ ಹೊಂದಿರುವ ಸುಧೀಂದ್ರ, 2003ರಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡರು. ಬೆಂಗಳೂರಿನಲ್ಲೂ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ನಂತರ ಚಾಮರಾಜನಗರ ಹಾಗೂ ಬೀದರ್ ನಲ್ಲಿ ಸೆಷನ್ ಜಡ್ಜ್ ಆಗಿ, ಬಳ್ಳಾರಿಯಲ್ಲಿ ಪ್ರಿನ್ಸಿಪಾಲ್ ಸೆಷನ್ ಜಡ್ಜ್ ಆಗಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಇದಕ್ಕೂ ಮುನ್ನ 2 ವರ್ಷ ಕಾಲ ಕೆಎಟಿಯಲ್ಲೂ ಕರ್ತವ್ಯ ನಿಭಾಯಿಸಿದ್ದಾರೆ.
ಭ್ರಷ್ಟಾಚಾರಕ್ಕೆ ಸಂಭಂಧಿಸಿ ದೇಶದ ನಾನಾ ಕೋರ್ಟುಗಳು ನೀಡಿರುವ ಪ್ರಮುಖ ತೀರ್ಪುಗಳನ್ನು ನಾಲಿಗೆ ಮೇಲೆಯೇ ಇಟ್ಟುಕೊಂಡಿರುವ ಸುಧೀಂಧ್ರ, ಅಂತಹ ಪ್ರಕರಣಗಳನ್ನು ವಕೀಲರು ಪ್ರಸ್ತಾಪಿಸುತ್ತಿದ್ದಂತೆಯೇ ಇವರು ಮಂತ್ರ ಉಚ್ಛಾರಣೆಯಂತೆ ಆದೇಶದ ಸಾರವನ್ನು ಪಠಿಸುತ್ತಿದ್ದರು. ಜನಪ್ರತಿನಿಧಿಗಳು ಅದರಲ್ಲೂ ಭ್ರಷ್ಟ ಜನಪ್ರತಿನಿಧಿಗಳು ಅಂದರೆ ಇವರಿಗೆ ಅಲರ್ಜಿ ಎಂಬುದನ್ನು ಇಲ್ಲಿ ಬಿಡಿಸಿಹೇಳಬೇಕಾಗಿಲ್ಲ.