ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸಲು ವಿಳಂಬವೇಕೆ?
ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸಲು ಸೋಮವಾರವೇ ಆದೇಶ ಹೊರಬಿದ್ದರೂ ಲೋಕಾಯುಕ್ತ ಪೊಲೀಸರು ವಿಳಂಬ ಮಾಡಿದ್ದು ಇದೇ ಸಕಾರಣಕ್ಕೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಕೊರತೆಯಂದಾಗಿ ನಿರಾಣಿ ವಿರುದ್ಧ ಪ್ರಕರಣದಲ್ಲಿ ತನಿಖಾಧಿಕಾರಿಯ ನೇಮಕ ವಿಷಯದಲ್ಲಿ ಸ್ವಲ್ಪ ವಿಳಂಬವಾಗಿದೆ.
ಡಿವೈಎಸ್ಪಿ ಶ್ರೇಣಿಯ ಅಧಿಕಾರಿಯೇ ಖಾಸಗಿ ದೂರಿನ ಪ್ರಕರಣದ ತನಿಖೆ ನಡೆಸಬೇಕು ಎಂದು ಲೋಕಾಯುಕ್ತ ಸಂಸ್ಥೆಯು ಇತ್ತೀಚೆಗೆ ಮಹತ್ವದ ನಿರ್ಧರ ತೆಗೆದುಕೊಂಡಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಬರೋಬ್ಬರಿ 9 ಎಸ್ಪಿ, 5 ಡಿವೈಎಸ್ಪಿ ಮತ್ತು 6 ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಉಳಿದಿವೆ! ಪ್ರಸ್ತುತ 4 ಮಂದಿ ಡಿವೈಎಸ್ಪಿಗಳಿದ್ದು, ಅವರೆಲ್ಲಾ ಈಗಾಗಲೇ ಅತಿರಥ ಮಹಾರಥರ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.
ಯಡಿಯೂರಪ್ಪ ವಿರುದ್ಧದ ಭದ್ರಾ ಮೇಲ್ದಂಡೆ ಗುತ್ತಿಗೆ ಮಂಜೂರು ಅವ್ಯವಹಾರ ಪ್ರಕರಣವನ್ನು ಲೋಕಾಯುಕ್ತ ಡಿವೈಎಸ್ಪಿ ಎಸ್. ಗಿರೀಶ್ ನಡೆಸುತ್ತಿದ್ದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪುತ್ರ ಬಾಲಕೃಷ್ಣೇಗೌಡ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣವನ್ನು ಡಿವೈಎಸ್ಪಿ ಪ್ರಸನ್ನ ವಿ. ರಾಜು ತನಿಖೆ ನಡೆಸುತ್ತಿದ್ದಾರೆ.
ಡಿವೈಎಸ್ಪಿ ಅಬ್ದುಲ್ ಅಹದ್ ಕೂಡ ಗೃಹ ಸಚಿವ ಆರ್. ಅಶೋಕ್ ವಿರುದ್ಧ ಡಿನೋಟಿಫಿಕೇಷನ್ ಪ್ರಕರಣದ ತನಿಖೆ ನಡೆಸುತ್ತಿದ್ದು, ಮತ್ತೊಬ್ಬ ಡಿವೈಎಸ್ಪಿ ಮಂಜು ನಾಥ್ ಹಲವು ಮಹತ್ವದ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.
ಆದರೆ, ಈ ಲೋಕಾಯುಕ್ತ ವಿಶೇಷ ಕೋರ್ಟ್ ನಿರಾಣಿ ವಿರುದ್ಧ ಪ್ರಕರಣದ ತನಿಖೆಯನ್ನು ನ. 16ರೊಳಗೆ ತನಿಖೆ ಪೂರ್ಣಗೊಳಿಸಿ ವರದಿ ನೀಡಲು ತಾಕೀತು ಮಾಡಿದೆ. ಇದೇ ವೇಳೆ ಯಡಿಯೂರಪ್ಪ, ಆರ್.ಅಶೋಕ್ ಮತ್ತು ಬಾಲಕೃಷ್ಣೇ ಗೌಡ ವಿರುದ್ಧ ಪ್ರಕರಣಗಳ ವರದಿಯನ್ನು ವಿಳಂಬ ಮಾಡದಂತೆ ಕೋರ್ಟ್ ತಾಕೀತು ಮಾಡಿದೆ.
ಈ ಹಿನ್ನೆಲೆಯಲ್ಲಿ ನಿರಾಣಿಯಂತಹ ಪ್ರಭಾವಿಗಳ ವಿರುದ್ಧ ತ್ವರಿತ ಹಾಗೂ ಸ್ವತಂತ್ರ ತನಿಖೆ ನಡೆಸಬೇಕಾದ ಅಗತ್ಯವಿದ್ದು, ತನಿಖಾಧಿಕಾರಿಗಳಿಗೆ ಇತರ ಪ್ರಕರಣಗಳ ಒತ್ತಡ ಇರಕೂಡದು. ಹೀಗಾಗಿ ನಿರಾಣಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲು ಸ್ವಲ್ಪ ವಿಳಂವಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.