ಕನಸಿನಲ್ಲೂ ಗೌಡರನ್ನು ಬೆದರಿಸಲು ಸಾಧ್ಯವಿಲ್ಲ: ರೇವಣ್ಣ ಗುಡುಗು
ದೇವೇಗೌಡರನ್ನು ಹೆದರಿಸಿಕೊಂಡು ರಾಜಕಾರಣ ಮಾಡಬೇಕೆನ್ನುವುದು ಬಿಜೆಪಿ ನಾಯಕರ ಕನಸು. ಆದರೆ ದೊಡ್ಡಗೌಡರನ್ನು ಹೆದರಿಸಲು ಪ್ರಯತ್ನಿಸಿದವರೆಲ್ಲ ಅವರ ಮನೆಗೆ ಹೋಗಿದ್ದನ್ನು ಒಮ್ಮೆ ನೆನಪಿಸಿಕೊಳ್ಳಲಿ ಎಂದು ಜೆಡಿಎಲ್ಪಿ ನಾಯಕ ಹೆಚ್. ಡಿ. ರೇವಣ್ಣ ತಿರುಗೇಟು ನೀಡಿದ್ದಾರೆ.
ದೇವೇಗೌಡರು ಆತುರಾತುರವಾಗಿ ಯೋಜನೆಯನ್ನು ಮಂಜೂರು ಮಾಡಿದ್ದಕ್ಕೆ ತಮ್ಮ ಆದ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ರೇವಣ್ಣ ಅವರು 'ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತ್ವರಿತವಾಗಿ ಕೃಷ್ಣಾ ನದಿ ನೀರನ್ನು ಹರಿಸಬೇಕೆಂಬ ಏಕೈಕ ಉದ್ದೇಶದಿಂದ ದೇವೇಗೌಡರು ಕಾಮಗಾರಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ನಿರ್ಧರಿಸಿದ್ದರು. ಅದೂ ತುಂಡು ಗುತ್ತಿಗೆಗಳಲ್ಲಿ ನೀಡಿದರೆ ಮತ್ತಷ್ಟು ಶೀಘ್ರವಾಗಿ ಯೋಜನೆ ಪೂರ್ಣಗೊಳ್ಳುತ್ತದೆ ಎಂಬುದಷ್ಟೇ ಅವರ ಎಣಿಕಾಯಾಗಿತ್ತು' ಎಂದು ಸಮಾಜಾಯಿಶಿ ನೀಡದ್ದಾರೆ.
ಇದೇ ಸಂದರ್ಭದಲ್ಲಿ, ಈ ಯೋಜನೆ ಬಗ್ಗೆ ಹಲವಾರು ಬಾರಿ ಆರೋಪಗಳು, ತನಿಖೆಗಳು ನಡೆದು ಹೋಗಿವೆ. ಇದೂ ಒಂದು ತನಿಖೆ ನಡೆಸಿಕೊಳ್ಳಲಿ. 46 ವರ್ಷದ ಹಿಂದೆ ದೇವೇಗೌಡರು ಹೊಳೆನರಸೀಪುರ ತಾಲೂಕಿನಲ್ಲಿ ಖರೀದಿಸಿದ್ದ 10 ಎಕರೆ ಭೂಮಿಯ ಬಗ್ಗೆ ತನಿಖೆ ನಡೆಸಲು ಹೋದವರೆಲ್ಲ ಈಗ ಜೈಲಿನಲ್ಲಿ ದೀಪಾವಳಿ ಆಚರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ರೇವಣ್ಣ ಲೇವಡಿ ಮಾಡಿದರು.