ಕಾರ್ಕಳದ ಕುಡುಕ ಭಾವನಿಂದ ನಾದಿನಿಗೆ ಚಾಕು
ಕಾರ್ಕಳ, ಅ.27: ಕುಡಿತದ ಅಮಲಿನಲ್ಲಿದ್ದ ವ್ಯಕ್ತಿ ತನ್ನ ಪತ್ನಿ ಮೇಲೆ ಕೋಪ ತೀರಿಸಿಕೊಳ್ಳುವ ಭರದಲ್ಲಿ ನಾದಿನಿಯನ್ನು ಇರಿದು ಕೊಂದ ಘಟನೆ ಕಾಬೆಟ್ಟು ಎಂಬಲ್ಲಿ ನಡೆದಿದೆ.
ಕಾಬೆಟ್ಟು ವಾಸಿ ಶೈಲಾ ಯಾನೆ ಶೈಲಜಾ(23) ಮೃತಪಟ್ಟ ದುರ್ದೈವಿ. ಪತಿ ಅರುಣ್ ನಿಂದ ದೂರಾಗಿದ್ದ ಈಕೆ ಅಕ್ಕ ಜ್ಯೋತಿಯೊಂದಿಗೆ ಕಾಬೆಟ್ಟಿನಲ್ಲಿ ವಾಸವಾಗಿದ್ದಳು.
ಜ್ಯೋತಿಯ ಪತಿ ತಮಿಳುನಾಡು ಸೋಮಯಪಾಳ್ಯನ ಪ್ರಭಾಕರ(33) ಎಂಬಾತನೇ ಕುಡುಕ ಹಾಗೂ ಈ ಸ್ಟೋರಿಯ ಕೊಲೆಗಾರ. ವೃತ್ತಿಯಿಂದ ಶಿಲ್ಪಿಯಾಗಿರುವ ಈತ ದೀಪಾವಳಿ ಹಬ್ಬಕ್ಕೆಂದು ಊರಿಗೆ ಬಂದಿದ್ದ.
ನಾದಿನಿ ಜೊತೆ ಸರಸ?: ಈ ನಡುವೆ ನಾದಿನಿ ಶೈಲಜಾ ಕಂಡು ಪ್ರಭಾಕರನಿಗೆ ಏನೋ ಒಂಥರಾ ಆಗಿದೆ. ಮೊದಲೇ ಶಿಲ್ಪಿ ಶೈಲೂ ಅಂಗಾಂಗಳನ್ನು ವರ್ಣಿಸುತ್ತಾ ಆಕೆಗೆ ಹತ್ತಿರವಾಗಿದ್ದಾನೆ. ಈ ವಿಚಾರ ಪತ್ನಿ ಜ್ಯೋತಿಗೆ ಹೇಗೂ ಗೊತ್ತಾಗಿ ರಂಪಾಟ ಮಾಡಿದ್ದಾಳೆ.
ಮನೆ ಜಗಳ ವಿಪರೀತವಾದಾಗ ಸೀದಾ ಮದ್ಯದಂಗಡಿಗೆ ಹೋಗಿ ವಿಪರೀತವಾಗಿ ಕುಡಿದು ಮಧ್ಯಾಹ್ನದ ವೇಳೆಗೆ ಮನೆಗೆ ಹಿಂತಿರುಗಿ ಊಟ ಮಾಡಿ ಮಲಗಿದ್ದಾನೆ.
ಮಲಗಿದ್ದವನ ಕೆಣಕಿದ್ದು ತಪ್ಪಾಯ್ತು:ನಿದ್ದೆಯಲ್ಲಿದ್ದ ಪತಿಯನ್ನು ಕೆಣಕಿದ ಜ್ಯೋತಿಯ ಮೇಲೆ ಕೆಂಡಮಂಡಾಲನಾ ಪತಿರಾಯ ದಡದಡನೇ ಎದ್ದವನೇ ಮನೆಯಲ್ಲಿದ್ದ ಚೂರಿಯನ್ನು ಹುಡುಕಿ ತಂದು ಯುದ್ಧಕ್ಕೆ ನಿಂತಿದ್ದಾನೆ.
ಈ ಸಂದರ್ಭದಲ್ಲಿ ಅಕ್ಕನ ಪರ ವಹಿಸಿ ವಕಾಲತ್ತು ನಡೆಸುತ್ತಿದ್ದ ನಾದಿನಿ ಶೈಲಜಾ ಎದೆಗೆ ಚೂರಿಯಿಂದ ಇರಿದಿದ್ದಾನೆ. ತಡೆಯಲು ಬಂದ ರವಿ ಎಂಬ ಸಂಬಂಧಿಕನಿಗೂ ಗಾಯಗಳಾಗಿದೆ. ರವಿಯನ್ನು ಈಗ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಕೊಂದವ ಠಾಣೆಯಲ್ಲಿ ಹಾಜರ್ : ಪತ್ನಿ ಜ್ಯೋತಿ ಕೂಡಾ ಗಾಯಗೊಂಡಿದ್ದು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.
ನಂತರ ಚೂರಿಯನ್ನು ಹಿಡಿದು ಪ್ರಭಾಕರ ನಗರ ಠಾಣೆಗೆ ಬಂದು ಶರಣಾಗಿದ್ದಾನೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶಪ್ಪ, ಠಾಣಾಧಿಕಾರಿ ಪ್ರಮೋದ್ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ಮುಂದುವರೆದಿದೆ.