ಸಾಕ್ಷಿಗೆ ಬೆದರಿಸಿದ ಕಟ್ಟಾಳು ಬಿ.ಕೆ.ಮಂಜು ವಿರುದ್ಧ ಎಫ್ಐಆರ್ ದಾಖಲು
ಹಗರಣಕ್ಕೆ ಸಂಬಂಧಿಸಿದಂತೆ ಕಟ್ಟಾ ಸುಬ್ರಮಣ್ಯ, ಕಟ್ಟಾ ಜಗದೀಶ, ಇಟಾಸ್ಕಾ ನಿರ್ದೇಶಕ ಶ್ರೀನಿವಾಸ್, ಮಧ್ಯವರ್ತಿ ಬಿ.ಕೆ. ಮಂಜು ಸೇರಿದಂತೆ 9 ಆರೋಪಿಗಳ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮಧುಮತಿ ಕುಟುಂಬದ ಕುಮಾರ, ವೆಂಕಟರಮಣ, ಮುನಿಶಾಮಪ್ಪ, ಮತ್ತು ಶ್ರೀನಿವಾಸ್ ಸಾಕ್ಷ್ಯ ಹೇಳಿದ್ದಾರೆ.
ಸಾಕ್ಷಿದಾರರಾದ ಮಧುಮತಿಗೆ ಸೇರಿದ ಬಂಡಿಕೋಡಿಗೆಹಳ್ಳಿ ಸರ್ವೆ ನಂ. 88ರಲ್ಲಿರುವ 10 ಗುಂಟೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಲಾಗಿದೆ. ಈ ಸಂಬಂಧ ಮಧುಮತಿ ಕಳೆದ ಸೆ. 12ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 20ರಂದು ಪೊಲೀಸರು ಆರೋಪಿ ವಿರುದ್ಧ ಸೆಕ್ಷನ್ 420, 468, 447, 504, 506 ಅನುಸಾರ ಎಫ್ಐಆರ್ ಸಹ ದಾಖಲಿಸಿದ್ದಾರೆ.
ಅಂದಹಾಗೆ, ಕೆಐಎಡಿಬಿ ಭೂ ಹಗರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ಆರೋಪಕ್ಕೆ ತುತ್ತಾಗಿರುವ ಕಟ್ಟಾಳು ಬಿ.ಕೆ. ಮಂಜು ಯಾರು ಅಂದರೆ ಆತ ಬಂಡಿಕೋಡಿಗೆಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ.
ಈತ, ಕಟ್ಟಾ ಕುಟುಂಬ ಒಡೆತನದ ಇಟಾಸ್ಕಾ ಕಂಪನಿಗೆ ರೈತರನ್ನು ಪರಿಚಯಿಸಿ, ಭೂಮಿ ಕೊಡಿಸಲು ಮಧ್ಯವರ್ತಿಯಾಗಿದ್ದ ಎಂಬ ಗಂಭೀರ ಆರೋಪ ಹೊತ್ತಿದ್ದಾನೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ ಇವರು ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.