ಕಟ್ಟಾ ಆಪ್ತರಿಂದ ಸಾಕ್ಷಿಗಳಿಗೆ ಬೆದರಿಕೆ, ಸಿ.ಡಿ.ಯಲ್ಲಿ ದಾಖಲು
ಮಾರಣಾಂತಿಕ ರಕ್ತ ಕ್ಯಾನ್ಸರಿನಿಂದ ಬಳಲುತ್ತಿರುವ ಕಟ್ಟಾ ಸುಬ್ರಮಣ್ಯ ತಮ್ಮ ಪುತ್ರನ ಸಮೇತ ಜೈಲುಪಾಲಾಗಿ ಯಾವುದೋ ಕಾಲವಾಯಿತು. ಈ ಮಧ್ಯೆ,ಕರಾಳ ಜೀವನ ಸಾಕಾಗಿದ್ದು, ಅಲ್ಲಿಂದ ಹೊರಬೀಳಲು ಪರೋಕ್ಷವಾಗಿ ಯತ್ನಿಸಿದ್ದಾರೆ. ಅದರ ಅಂಗವಾಗಿ, ಕಟ್ಟಾ ಬೆಂಬಲಿಗರು ಕೆಐಎಡಿಬಿ ಡಿನೋಟಿಫಿಕೇಶನ್ ಪ್ರಕರಣದ ಸಾಕ್ಷಿದಾರರಿಗೆ ಬೆದರಿಕೆಯೊಡ್ಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕೆಐಎಡಿಬಿ ಭೂ ಹಗರಣದ 8ನೇ ಆರೋಪಿ ಬಿ.ಕೆ. ಮಂಜು ವಿರುದ್ಧ ಸಾಕ್ಷ್ಯ ಹೇಳದಂತೆ ಬಂಡಿಕೋಡಿಗೆಹಳ್ಳಿಯ ಮಧುಮತಿ ಎಂಬವರಿಗೆ ಆಮಿಷವೊಡ್ಡಿ, ಅದಕ್ಕೆ ಒಪ್ಪದಿದ್ದಾಗ ಸದರಿ ಮಹಿಳೆಗೆ ಬೆದರಿಕೆ ಹಾಕಿರುವುದು ಬಯಲಾಗಿದೆ.
ತಮಗೆ ಬೆದರಿಕೆ ಹಾಕಿರುವ ಸಂದರ್ಭದಲ್ಲಿ ನಡೆದ ಮಾತುಕತೆಯನ್ನು ಚಿತ್ರೀಕರಣ ಮಾಡಲಾಗಿದ್ದು, ಆ ವಿಡಿಯೋ ಸಿ.ಡಿ. ಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲು ಸಾಕ್ಷಿದಾರರಾದ ಮಧುಮತಿ ನಿರ್ಧರಿಸಿದ್ದಾರೆ. ಬಿ.ಆರ್. ಮುನಿರಾಜು ಮತ್ತು ಒಬ್ಬ ಅಪರಿಚಿತ ವ್ಯಕ್ತಿ ಆಮಿಷವೊಡ್ಡಿ ಬೆದರಿಸಿರುವ ಅರ್ಧ ಗಂಟೆಗೂ ಹೆಚ್ಚು ಅವಧಿಯ ಸಂಭಾಷಣೆ ಸಿ.ಡಿ.ಯಲ್ಲಿದೆ ಎನ್ನಲಾಗಿದೆ.